Thursday, September 18, 2008

ಮಣ್ಕುಳಿ


ಮಣ್ಕುಳಿ. ಅಂದರೆ ಮಣ್ಣಿನ ಕುಳಿ ಅಥವಾ ಮಣ್ಣಿನ ಹೊಂಡ.
ನಮ್ಮೂರಾದ ಮಾಳಲಗಾಂವಿನ ಮೂಲೆಯಲ್ಲಿರುವ ಜಾಗ. ಇಲ್ಲಿರುವದು ಕೇವಲ ಮೂರು ಮನೆಗಳು ಮಾತ್ರ. ಎಲ್ಲಿ ನೋಡಿದರೂ ಮುಗಿಲೆತ್ತರದ ಮರಗಳು ತುಂಬಿರುವ ನಮ್ಮೂರಲ್ಲಿ, ಮಣ್ಕುಳಿಯ ಬೆಟ್ಟ ಅಂದರೆ ಚಾಮುಂಡಿ ಬೆಟ್ಟದಿಂದ ಮೈಸೂರನ್ನು ನೋಡುವ ವೀವ್ ಪಾಯಿಂಟ್ ಇದ್ದಂತೆ...:-) ಮಧ್ಯದಲ್ಲಿ ಹಚ್ಚಹಸಿರಿನ ಭತ್ತದ ಗದ್ದೆಗಳು ತುಂಬಿರುವ ಉದ್ದನೆಯ ಕಣಿವೆ, ಆಚೀಚೆ ಹಸಿರನೆಯ ಬೆಟ್ಟ. ದೂರದಲ್ಲಿ ಕಾಣುವ ಪರಮಣ್ಣನ ಹಾಗೂ ಕ್ರಷ್ಣಪ್ಪನ ಮನೆಯ ಹಂಚುಗಳು. ನಮ್ಮಜ್ಜ ಹೇಳುವ ಹಾಗೆ ಒಂದು ಕಾಲದಲ್ಲಿ ಈ ಮಣ್ಕುಳಿ ಸಂಪೂರ್ಣವಾಗಿ ಅಡವಿಯಿಂದ ತುಂಬಿತ್ತಂತೆ. ಆಗ ಕ್ರಷ್ಣಪ್ಪ ಇನ್ನೊಂದು ಊರಿನಿಂದ ಇಲ್ಲಿಗೆ ಬಂದು ಕಾಡು~ಬೆಟ್ಟ ಸವರಿ ತೋಟ~ಗದ್ದೆ ಮಾಡಿದನಂತೆ. ನಮ್ಮೂರಿನ ಎಲ್ಲರ ಅಭಿಪ್ರಾಯದಂತೆ ಈ ಮಣ್ಕುಳಿಯಲ್ಲಿ ಒಲೆ ಹೊತ್ತಿಸಿದ ಈ ಕ್ರಷ್ಣಪ್ಪ ಬಹಳ ಶ್ರಮಜೀವಿ. ಆತನಿಗೆ ಈಗ ಸುಮಾರು ಎಂಭತ್ತರ ಹರೆಯ. ಒಂದು ದಿನ ಅಲ್ಲೇ ಹತ್ತಿರವಿದ್ದ ಜೇನು ಮರದ ಕೆಳಗೆ ಬೆಂಕಿ ಹಾಕಿ, ಆಗ ಸಿಟ್ಟಿಗೆದ್ದ ನೊಣಗಳಿಂದ ಐವತ್ತು ಅರವತ್ತು ಕಡಿತಗಳನ್ನು ತಿಂದರೂ ಏನೂ ಆಗದವರಂತೆ ಸುಖವಾಗಿದ್ದ ಈ ಕ್ರಷ್ಣಪ್ಪನಿಗೆ ನಾನಂತೂ ಸಲಾಮು ಹೊಡೆಯುತ್ತೇನೆ....

ಈ ಮಣ್ಕುಳಿಯಲ್ಲಿ ಒಂದು ಜಲಪಾತವಿದೆ. ಅದರ ಹೆಸರು ’ನಾಗುಂದ ಹಳ್ಳ’.

ಮೊನ್ನೆ ಊರಿಗೆ ಹೋದಾಗ ನಾನು ಮತ್ತು ಶಿರ್ಯಪಚ್ಚಿ ಅಲ್ಲಿಗೆ ಹೋಗಿದ್ದೆವು. ಪರಮಣ್ಣನ ಮನೆಗೆ ಹೋಗಿ, ಇತ್ತೀಚೆಗೆ ಮದುವೆಯಾದ ಶ್ರೀಕಾಂತನನ್ನು ಮಾತನಾಡಿಸಿ, ಉಂಬಳದ ಕಡಿತವನ್ನು ಸಹಿಸಿ, ಹಳ್ಳದ ಮಳೆಗಾಲದ ಭೋರ್ಗರೆತವನ್ನು ನೋಡಿಬಂದೆವು. ಪರಮಣ್ಣ ಅವನ ಮನೆಗೆ ಇದೇ ಹಳ್ಳದಿಂದ ಹಣಿನೀರಿನ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾನೆ.

ನಾಗುಂದ ಹಳ್ಳ... ಎದುರಿನಿಂದ ಇದನ್ನು ನೋಡಲಸಾಧ್ಯ.
ಪಕ್ಕದಲ್ಲಿ ಇರುವ ಕಿರಿದಾದ ಕಾಲುವೆಯಲ್ಲಿ ನಿಂತು ಮಾತ್ರ ನೋಡಬಹುದು..
ಈ ಹಳ್ಳದಲ್ಲಿ ಬರುವ ನೀರಿನ ಹೊಡೆತಕ್ಕೆ ಒಂದು "Turbine" ಕೂರಿಸಿದರೆ ಆರಾಮಾಗಿ 10 ಮೆಗಾವ್ಯಾಟ್ ಕರೆಂಟು ಪಡೆಯಬಹುದು ಹಾಗೂ KEBಯವರ ಕಾಲು ಹಿಡಿಯುವದನ್ನು ತಪ್ಪಿಸಿಕೊಳ್ಳಬಹುದು ಎಂಬುದು ನಮ್ಮನೆಯ ವಿಶ್ವಣ್ಣನ ಅನೇಕ ವರ್ಷಗಳ ವಾದ.
ಪರಮಣ್ಣ ಮತ್ತು ಶಿರ್ಯಪಚ್ಚಿ.....



ಈ ಘಟ್ಟದ ಕೆಳಗಿರುವ ಮಣ್ಕುಳಿ ನೋಡಲು ಕಣ್ಣಿಗೆ ಸ್ವರ್ಗದಂತೆ ಭಾಸವಾದರೂ, ನಿಜಕ್ಕೂ ಅಲ್ಲಿನ ಬದುಕು ಕಷ್ಟಕರ. ಘಟ್ಟಗಳನ್ನು ಹತ್ತಿ ಇಳಿದು ಅಲ್ಲಿ ಹೋಗಿ ತಲುಪುವದೇ ಒಂದು ದೊಡ್ಡ ಸಾಹಸ.ಮೊನ್ನೆ ಪರಮಣ್ಣನ ಹೊಸ ಆಕಳೊಂದನ್ನು ಹುಲಿ ಹೊತ್ತೊಯ್ದಿದೆಯಂತೆ!!! ಹತ್ತಿರದಲ್ಲೇ ಹುಲಿ ಮತ್ತು ಕಪ್ಪುಚಿರತೆಗಳು ತಮ್ಮ ಇರುವನ್ನು ಸೂಚಿಸುತ್ತಾ ಗಸ್ತು ತಿರುಗುತ್ತಿರುವಾಗ, ಮನೆಯಲ್ಲಿ ಒಳಗಡೇ ಕುಳಿತಿರಲೂ ಭಯವೇ.

ಇದೇ ಮಣ್ಕುಳಿಯ ಘಟ್ಟದ ಮೂಲಕವಾಗಿ ಮೊದಲ ಸಲ ನಮ್ಮೂರಿಗೆ ಕರೆಂಟು ತರುವ ಹುಮ್ಮಸ್ಸಿನಲ್ಲಿ, ಮಣ್ಕುಳಿಯ ಕಾನನದಲ್ಲಿ ಕರೆಂಟು ಕಂಬಗಳನ್ನು ಎಳೆದು ತಂದು ನಿಲ್ಲಿಸಿ ತಂತಿ ಜೋಡಿಸಿದ ನಮ್ಮೂರಿನ ಎಲ್ಲರ ಶ್ರಮವೂ ನೆನಪಿಸಿಕೊಳ್ಳಬೇಕಾದ್ದೇ. KEB ಯವರು ತಲೆಹಾಕಿಯೂ ಮಲಗದಂಥಾ ದಿಕ್ಕಿನಲ್ಲಿರುವ ನಮ್ಮೂರಲ್ಲಿ ಎಲ್ಲರ ಮನೆಯವರೂ ಕರೆಂಟಿನ ಮೇಸ್ತ್ರಿಗಳೇ...!!!

ಮಣ್ಕುಳಿಯ ಘಟ್ಟ ಇಳಿಯುವ ದಾರಿ...

ನಮ್ಮೂರಿನ ದೇವಸ್ಥಾನ ಚಂದಗುಳಿಗೆ ಮೊದಲು ಕಾಲುಹಾದಿಯಲ್ಲೇ ಹೋಗುತ್ತಿದ್ದಾಗ ಮಣ್ಕುಳಿಯ ಘಟ್ಟಗಳು ಎಂದರೆ ಭಯವಾಗುತ್ತಿತ್ತು. ಸುತ್ತಲೂ ಆವರಿಸಿರುವ ಕರಿಯ ಅಡವಿ, ದಾರಿಯಲ್ಲಿ ರಕ್ತ ಹೀರುವ ಕೋಟಿಗಟ್ಟಲೇ ಉಂಬಳಗಳು. ಮೊಳಗೊಮ್ಮೆಯಲ್ಲಿ ಯಾರನ್ನಾದರೂ ಕೇಳಿ, ಮಣ್ಕುಳಿಯ ಬಗ್ಗೆ ಎಲ್ಲರಿಗೂ ವಿಶೇಷ ಆದರವಿದೆ.... ಎಲ್ಲಾ ದೃಷ್ಟಿಯಿಂದಲೂ....

8 comments:

Unknown said...

A captivating read, Looks like you have the talent to write, try to develop it.

Pramod said...

Very gud narration :) ಮಾಳಲ೦ಗಾವಿಗೆ ಹೋದ ಹಾಗೆ ಆಯಿತು :)

Anantha said...

Nicely written yaar, surely this is a product of long term effort and your interest in writing..

Ramprasad said...

Your writing style is really nice and appealing.

Looks like you have read a lot of
K.P.Tejaswi's books on nature.Style seems to be deeply influenced by the same.

Aakash Ganapathy said...

MR....Nimma baraha superaagide...

Swalpa Current affairs baggenu baritheera...Namma Politrics bagge baigala bariri

Vishnu D H said...

nice post Satish :)

Shailaja said...

ಸತೀಶ ಖುಷಿ ಆತು.
ಮಣ್ಕುಳಿ ಬಗ್ಗೆ ಓದಿ.ಯಾನು ಕೆಲಸದಲ್ಲಿ ಕಳೆದು ಹೋಗೊಮೊದ್ಲು ಅಪ್ಪಚ್ಚಿ,ಪಾಮಣ್ನ,ಶ್ರೀಧರಣ್ಣ ಎಲ್ಲ ಅಲ್ಲೆಲ್ಲ ತಿರುಗಿದ್ದು ನೆನಪಾತು.ಪೋಟೋನೂ ಚಂದ ಬೈಂದು.ಬರೀತಿರು.
ಶೈಲಜಕ್ಕ.

Unknown said...

Maga Satisha, I am really jealous about your activities. You are doing great job man. Nex time yelladru hoguva plan madhidre please inform madu, adhre nanu join agthini.