Monday, December 8, 2008

ದಬ್ಬೆ ಜಲಪಾತ

ದಬ್ಬೆ ಜಲಪಾತ / ಕೆಪ್ ಜೋಗ :

ಬೆಂಗಳೂರಿನಲ್ಲಿ ದಿನವಿಡೀ ಕಂಪ್ಯೂಟರನ್ನು ಎವೆಯಿಕ್ಕದೇ ನೋಡುತ್ತಿರುವ ಕಣ್ಣುಗಳಿಗೆ, ದಿನವಿಡೀ ವಾಹನಗಳು ಕಾರುವ ಹೊಗೆಯನ್ನು ಕುಡಿಯುವ ಶ್ವಾಸನಾಳಗಳಿಗೆ, ವರ್ಷವಿಡೀ ಕಿವಿ ಹರಿದುಹೋಗುವಷ್ಟು ಶಬ್ದಾಘಾತಗಳಿಂದ ತತ್ತರಿಸಿಹೋಗುವ ಕಿವಿಗಳಿಗೆ ಏನಾದರೂ ಸಾಂತ್ವನವನ್ನೀಯುವ ಬಗೆ ಬೇಕೇ ಬೇಕಿತ್ತು.

ಕೃಷ್ಣ, ಪ್ರವೀಣ ನಾರಾ, ಮಿಥುನ್ ಯು, ಪ್ರದೀಪ ಕೊಪ್ಪಾ, ಪ್ರಮೋದ nc, ಪವನ್ ಶಾಸ್ತ್ರಿ ಎಲ್ಲಾ ಕೂಡಿಕೊಂಡು ದಬ್ಬೆ ಜಲಪಾತದೆಡೆಗೆ ಹೊರಟೆವು. ಈ ಮೊದಲೇ ಇಲ್ಲಿಗೆ ಚಾರಣಿಸಿದ್ದ ಶ್ರೀಕಾಂತ್ ಅವರ ಮಾರ್ಗದರ್ಶನ ಇದ್ದಿದ್ದರಿಂದ ನಮ್ಮ ಪ್ರಯಾಣದ ಎಲ್ಲಾ ಪೂರ್ವಯೋಜನೆಗಳು ಸುಲಲಿತವಾದವು. ’ನಕ್ಸಲರ ಕಾಟ’ ಎಂಬ ಭಯ ಎಲ್ಲ ಕಡೆ ಆವರಿಸಿರುವದರಿಂದ,”ಶಿವಮೊಗ್ಗದ ಕಡೆ ಕಾಡು ತಿರುಗಲು ಹೊರಟಿದ್ದೇವೆ”, ಎಂದ ಕೂಡಲೇ ನನ್ನ ಅಮ್ಮ ನನಗೊಮ್ಮೆ ಎಚ್ಚರಿಕೆಯ ಸುರಿಮಳೆಗೈದಳು. ’ಪೇಟೆಯಲ್ಲಿ ಭಯೋತ್ಪಾದಕರ ಕಾಟ, ಕಾಡಿನಲ್ಲಿ ನಕ್ಸಲರ ಕಾಟ. ಎಲ್ಲಿ ಹೋದರೂ ಇದ್ದರೂ ತೊಂದರೆ ತಪ್ಪಿದ್ದಲ್ಲ’, ಎಂದು ಹೇಳಿ ನಾನೂ ಕೈ ತೊಳೆದುಕೊಂಡೆ:-)




ರಾತ್ರಿಯ ಶಿವಮೊಗ್ಗೆಯ ರೈಲು ಬಳಸಿ, ಸಾಗರದಲ್ಲಿ ತಿಂಡಿ ತಿಂದು, ಕಾರ್ಗಲ್(ಸಾಗರದಿಂದ ಜೋಗದ ರಸ್ತೆ, 20km) ಎಂಬ ಊರಿಗೆ ಬಸ್ಸಿನಲ್ಲಿ ಬಂದೆವು. ಇಲ್ಲಿಂದ ಭಟ್ಕಳ ರಸ್ತೆಯಲ್ಲಿ ಹೊಸಗದ್ದೆ (ಕಾರ್ಗಲ್ ನಿಂದ 20km, ಭಟ್ಕಳದ ಕಡೆಗೆ) ಎಂಬ ಊರಿನಲ್ಲಿ ಇಳಿದುಕೊಂಡು ಸುಮಾರು ಆರು ಕಿಮಿ ಇರುವ ದಬ್ಬೆಯ ಜೋಗದ ಕಡೆ ನಡೆದೆವು.

ದಾರಿಯುದ್ದಕ್ಕೂ ಸಿಕ್ಕುತ್ತಿದ್ದ ಹರಣಿ ನೀರಿನಲ್ಲಿ ಆಟವಾಡುತ್ತಾ, ಕಿರು ಜಲಪಾತಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುತ್ತಾ ಮುಂದೆ ಸಾಗುತ್ತಿದ್ದೆವು. ಆದರೆ ದಾರಿಯುದ್ದಕ್ಕೂ ಇದ್ದ ಅನೇಕ ತಿರುವುಗಳು ನಮ್ಮನ್ನು ಬಹಳ ಸುಲಭವಾಗಿ ದಾರಿತಪ್ಪಿಸುವಂತಿದ್ದವು. ದಬ್ಬೆ ಜಲಪಾತದಷ್ಟೇ ಹೆಸರು ಮಾಡಿದವರೆಂದರೆ ದಬ್ಬೆಮನೆಯ ಮಂಜುನಾಥ ಗೌಡರು. ಇವರ ಮನೆಯ ಎದುರಿನ ಗದ್ದೆಯಂಚಿನಲ್ಲೇ ಕೆಳಗಡೆ ಜಲಪಾತವಿರುವದರಿಂದ, ಬಂದ ಚಾರಣಿಗರಿಗೆ ಊಟ, ವಸತಿ ಇತ್ಯಾದಿ ಇವರ ಮನೆಯಲ್ಲೇ ನೆರವೇರುತ್ತದೆ. ಆದ್ದರಿಂದ ದಾರಿಯುದ್ದಕ್ಕೂ ಕಂಡಕಂಡವರಲ್ಲೆಲ್ಲಾ "ಹೊಯ್... ಮಾರಯ್ರೆ...ಗೌಡ್ರ ಮನೆಗೆ ದಾರಿ ಹೆಂಗೆ...?" ಎಂದು ವಿಚಾರಿಸುತ್ತಿದ್ದೆವು.

ಅಂತೂ ಗೌಡರ ಮನೆಗೆ ಬರುವಷ್ಟರಲ್ಲೇ ಮಧ್ಯಾಹ್ನವಾಗಿತ್ತು. ’ಕೊನೆಯಲ್ಲಿ ಬೇಕಾಗಬಹುದು’ ಎಂದು ಗೌಡರು ಕೊಟ್ಟ ಹಗ್ಗವನ್ನು ಹೆಗಲಿಗೆ ಏರಿಸಿ ಭತ್ತದ ಗೆದ್ದೆಯ ತುದಿಯಿಂದ ಕೆಳಗೆ ಇಳಿಯಲು ಶುರು ಮಾಡಿದೆವು. ಸುಮಾರು ಅರ್ಧ ಕಿಮಿಯಷ್ಟು ಲಂಬವಾಗಿ ಗದ್ದೆಯ ನೆತ್ತಿಯಿಂದ ಇಳಿಯಬೇಕು. ಕೇವಲ ಮರಗಳ ಹಾಗೂ ಬಳ್ಳಿಗಳ ಕಾಂಡದ ಸಹಾಯದಿಂದ ಕೆಳಗೆ ಸಾವಧಾನವಾಗಿ ಇಳಿಯುತ್ತಿದ್ದ ಅನುಭವವಂತೂ ’ಸಖತ್’. ಕೆಲವೊಮ್ಮೆ ನೀವು ಕೈಯಲ್ಲಿ ಹಿಡಿದಿರುವದು ಬಳ್ಳಿಯೋ ಅಥವಾ ಹಾವೋ ಎಂದು ಗೊಂದಲವಾಗುತ್ತಿತ್ತು.!!! ದಾರಿಯುದ್ದಕ್ಕೂ ಹಾವಿನ ಹಾಗೂ ಯಾವಾಗ ಬೇಕಾದರೂ ಆಕ್ರಮಣ ಮಾಡಬಲ್ಲಂತಹ ಕರಡಿಯ ಅಸ್ತಿತ್ವದ ಬಗ್ಗೆ ಒಂದು ಲಕ್ಷ್ಯವನ್ನಿಟ್ಟುಕೊಂಡೇ ಕೆಳಗೆ ಇಳಿದೆವು.



ದಬ್ಬೆಯ ವೈಶಿಷ್ಟ್ಯವೆಂದರೆ ಕೆಳವರೆಗೆ ನೀವು ಇಳಿಯುವವರೆಗೂ ಜಲಪಾತ ಗೋಚರಿಸುವದಿಲ್ಲ. ಆದರೆ ಸುಮಾರು 20-30 ಅಡಿಗಳಷ್ಟು ಎತ್ತರ ಬಾಕಿ ಇರುವಾಗ ಇದು ಹಠಾತ್ತಾಗಿ ಗೋಚರಿಸುತ್ತದೆ. ಆ ದೃಶ್ಯದ ವೈಭವವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಪ್ರದೀಪ ಹೇಳುವಂತೆ, ’’God levellu magaa... God levallu..."!!!.




ಎಲ್ಲರೂ ಉತ್ಸಾಹಭರಿತರಾಗಿ ನೀರಿನಲ್ಲಿ ಆಟ-ಸ್ನಾನಗಳನ್ನು ಮುಗಿಸಿ ಸ್ವಲ್ಪ ಸಮಯ ಪೃಕೃತಿಯ ಸವಿಯನ್ನು ಸವಿಯುತ್ತಾ ಅಲ್ಲೇ ಕಳೆದೆವು.
ದಬ್ಬೆ ಜೋಗದ ಹತ್ತಿರದ ನೋಟ.
ಗಾಳಿಯ ರಭಸಕ್ಕೆ
ನೀರು ಸಿಡಿಯುವದರಿಂದ
ಹತ್ತಿರದವರೆಗೆ
ಕ್ಯಾಮೆರಾ
ತರಲಾಗುವದಿಲ್ಲ.







ಮತ್ತೆ ತಿರುಗಿ ಬೆಟ್ಟವನ್ನು ಹತ್ತಿ ಬರುವಷ್ಟರಲ್ಲಿ ಎಲ್ಲರ ಹೊಟ್ಟೆ ನಿರ್ವಾತವಾಗಿದ್ದರೂ, ಮನಸ್ಸು ಮಾತ್ರ ಗೌಡರ ಮನೆಯಲ್ಲಿ ಆಗಲೇ ತಯಾರಾಗಿದ್ದ ಬಿಸಿಬಿಸಿ ಅನ್ನ-ಸಾರು, ಮಜ್ಜಿಗೆ, ಕಡಿ ಉಪ್ಪು, ಮಿಡಿ ಉಪ್ಪಿನಕಾಯಿ ಇವನ್ನೆಲ್ಲಾ ಮೇಯುವ ಆಸೆಯಿಂದ ಉಲ್ಲಸಿತವಾಗಿತ್ತು.


ಗೌಡರ ಮನೆಯ ಗದ್ದೆಯಲ್ಲಿ ಕ್ಲಿಕ್ಕಿಸಿದ ಭತ್ತದ ತೆನೆ >>










<< ಗೌಡರ ಮನೆಯ ಹಸಿ ಅಡಿಕೆ.


ಒಟ್ಟಿನಲ್ಲಿ ದಬ್ಬೆಜೋಗ ಒಂದು ದಿನದ ಚಾರಣಕ್ಕೆ ಅತಿಸೂಕ್ತವಾದ ಜಾಗ. ಬೇಕಷ್ಟು ನಡಿಗೆ, ಕಾಡು, ಇಳಿಯುವದು, ಹತ್ತುವದು, ಕೆಲವೊಂದು ಕಡೆ ಸವಾಲುಹಾಕುವಷ್ಟು. ಒಟ್ಟಿನಲ್ಲಿ ನಮಗಿರುವ ಪೃಕೃತಿಯ ಜೊತೆಗಿನ ಒಡನಾಟದ ಬಯಕೆ ಕೊಂಚವಾದರೂ ಈಡೇರುವದರಲ್ಲಿ ಸಂಶಯವಿಲ್ಲ.


ಹಾಗೆಯೇ ನಮ್ಮ ಮುಂದಿನ ಹವಣಿಕೆಯ ಪ್ರಕಾರ ಮತ್ತೆ ಸಾಗರದತ್ತ ಪ್ರಯಾಣಿಸಲು, ವ್ಯಾನೊಂದನ್ನು ಬಾಡಿಗೆಗೆ ಪಡೆಯಲು ಪಕ್ಕದ ಊರಾದ ಕೊಡ್ಲಕೆರೆಯ ಇನ್ನೊಂದು ಗೌಡರ ಮನೆಯತ್ತ ಬೆಳದಿಂಗಳಿನಲ್ಲಿ ನಡೆದೆವು.

ದಬ್ಬೆ ಜೋಗಕ್ಕೆ ನೀವೂ ಹೋಗಿಬನ್ನಿ. ಆನಂದಿಸಿ.

3 comments:

ಅನಂತ said...

ಫೋಟೊಗಳು ಸಕ್ಕತ್ತಾಗಿವೆ.. :)

Pramod said...

ಪ್ರವಾಸ ಪ್ರಯಾಸ ಮಸ್ತ್ ಆಗಿದೆ. ಹ೦ಗೇ ನಾನು ನಡ್ಕೊ೦ಡು ಹೋದ ಹಾಗೆ ಅನಿಸ್ತು.

Unknown said...

ಅಲ್ಲಿಯೇ ಸಮೀಪ ಕಾನೂರು ಕೋಟೆ ಅಂತಲೂ ಇದೆ ಅದು ಅಹಳ ಸೂಪರ್ ಆಗಿದೆ. ಮತ್ತೊಮ್ಮೆ ಬಂದಾಗ ಬನ್ನಿ