Saturday, June 24, 2023

ಸತೀಸ ಹಾಗೂ ಇತರೆ ಹೆಸರಿನ ಅವಾಂತರಗಳು

    ಇದು ನನಗಿರುವ ಅನೇಕ ಹೆಸರುಗಳಿಂದಾದ ಅವಾಂತರಗಳ ಸರಮಾಲೆಯ ಕಥೆ. ಆಂಧ್ರಪ್ರದೇಶದ ಅಥವಾ ತಮಿಳುನಾಡಿನ ಜನರ ಉದ್ದುದ್ದ ಹೆಸರುಗಳ ಕಥೆಯನ್ನು ಕೇಳಿ ನಗುತ್ತಿದ್ದ ನನಗೂ ಅದೇ ಪರಿಸ್ಥಿತಿ ಬಂದು ನನ್ನ ಕುರಿತೇ ನಾನು ನಗುವಂತಾಯಿತು.


೧) ಸತೀಸ : ಇದು ನನ್ನ ಜನನ ದಾಖಲಾತಿಯ ಹೆಸರು !!! ನಾನು ಹುಟ್ಟಿದಾಗ ತಾಲೂಕು ಆಫೀಸ್ನಲ್ಲಿ ನನ್ನ ಹೆಸರನ್ನು ಬರೆಯಿಸಿದವರು ಯಾರೋ... ಬರೆದ ಸರಕಾರೀ ನೌಕರ, ಪುಣ್ಯಾತ್ಮ ಯಾರೋ ಗೊತ್ತಿಲ್ಲ... "ಸತೀಶ" ಬದಲಿಗೆ "ಸತೀಸ" ಎಂದು ನನ್ನ Birth certificate ಹೆಸರು ಆಯಿತು.


೨) M.R.ಸತೀಶ : ಇದು ನನ್ನ ೧ ರಿಂದ ೧೦ ನೇ ತರಗತಿ ವರೆಗಿನ ಶಾಲೆಯ ದಾಖಲಾತಿ ಹೆಸರು. M ಅಂದರೆ ಮಳಲಗಾಂವ (ನನ್ನೂರು), R - ರಾಮಕೃಷ್ಣ (ನನ್ನ ತಂದೆಯವರ ಹೆಸರು) .. ಹೀಗೆ MR ಎಂದು ಸೇರ್ಪಡೆ ಆಯಿತು. ಈ ರೀತಿ ಹೆಸರುಗಳು ತುಂಬಾ catchy ಇರುತ್ತದೆ ಎಂದೋ ಏನೋ, ಮಳಲಗಾಂವ್ ಶಾಲೆಯ ಕಿಷೋರ್ ಸರ್ ಹೀಗೆ ನನ್ನ ನಾಮಕರಣವನ್ನು ಮಾಡಿದರು. 


೩) ಸತೀಶ MR : ೧೦ನೇ ತರಗತಿಯ ಕೊನೆಯಲ್ಲಿ, ಮುಖ್ಯೋಪಾಧ್ಯಾಯರು ನನ್ನನ್ನು ಕರೆದು, "ನೋಡು... ನಿನ್ನ ಹೆಸರಿನಿಂದ ತುಂಬ ಅವಾಂತರಗಳು ಆಗಬಹುದು" ಎಂದು ಭವಿಷ್ಯ ನುಡಿದು, "MR ಸತೀಶ" -->  "ಸತೀಶ MR" ಎಂದು ಮಾಡಿದರು. ಇದು ೧೦ ನೇ ತರಗತಿ ನಂತರದ ಎಲ್ಲ ಕಾಲೇಜಿನಲ್ಲಿನ ಹೆಸರು.


೪) ಸತೀಶ ಮಳಲಗಾಂವ ರಾಮಕೃಷ್ಣ : ಇದು ನನ್ನ ಇತ್ತೀಚಿನ ಹೆಸರು. ಪಾಸ್-ಪೋರ್ಟ್ ಇತ್ಯಾದಿಗಳಲ್ಲಿ, ಕೇವಲ MR ಎಂದು ನಮೂದಿಸುವದು ಸಾಧ್ಯವಿಲ್ಲದ್ದರಿಂದ, ನನ್ನ ಹೆಸರು ವಿಸ್ತಾರವಾಯಿತು.  ಇದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮೊದಲ ಹೆಸರು - "ಸತೀಶ" .. ಕೊನೆಯ ಹೆಸರು - "ಮಳಲಗಾಂವ ರಾಮಕೃಷ್ಣ" ಎಂದಾಯಿತು !!!


ಇದರ ನಂತರ ಅನೇಕ ವಿಚಿತ್ರ ಸಂದರ್ಭಗಳು ಎದುರಾಗತೊಡಗಿದವು... ನಾನು ವಿದೇಶದಲ್ಲಿ ಇದ್ದಾಗ, ಅಲ್ಲಿನ ಸಂಪ್ರದಾಯದಂತೆ, ಕೊನೆಯ ಹೆಸರನ್ನು ಕರೆಯಲು ಹೋಗಿ, ಅಲ್ಲಿನ ಜನರಿಗೆ ಸರಿಯಾಗಿ "ಮಳಲಗಾಂವ ರಾಮಕೃಷ್ಣ" ಎಂದು ಹೇಳಲಾಗದೇ,

"ಮಿಸ್ಟರ್ ಮಳಲ್" 

"ಮಿಸ್ಟರ್ ಮಳಲಲ್" 

"ಮಿಸ್ಟರ್ ಮಳಲ್ ರಾಮಾ" 

"ಮಿಸ್ಟರ್ ಮಳ್ ರಾಮ್ ಸತೀಶ್"

     ಎಂದಿತ್ಯಾದಿ ಹೆಸರುಗಳಿಂದ ನನ್ನನ್ನು ಕರೆಯುತ್ತಿದ್ದರು :) ನನ್ನ ಊರಿನ ಹೆಸರು ಹೇಳಲಾಗದೇ, ಕೆಲವೊಂದು ಕಡೆ "ಸತೀಶ್ M ರಾಮಕೃಷ್ಣ" ಎಂದು ಬರೆದರು. ನನ್ನ ಕೊನೆಯ ಹೆಸರಿನಲ್ಲಿ 2 ಹೆಸರುಗಳಿಂದ ಇದ್ದಿದ್ದರಿಂದ, ಎಷ್ಟೋ ಕಡೆ documents/form ತಂಬಿಸುವಾಗ, ಜಾಗದ ಅಭಾವವಾಗಿ ... MalalaganvRamakr, MalalaganvR ಎಂದೆಲ್ಲಾ ಎನೇನೋ ತುಂಬಿದ್ದಿದೆ. ಇನ್ನು ಬ್ಯಾಂಕುಗಳಲ್ಲಿ, PAN ಕಾರ್ಡಿನಲ್ಲಿ, ಹೀಗೆಲ್ಲಾ ಅವರಿಗೆ ಬೇಕಾದಂತೆ ಹೆಸರನ್ನು ಉದ್ದಗಿಡ್ಡ ಮಾಡಿ ಬರೆದಿದ್ದೂ, ಕರೆದಿದ್ದೂ ಆಗಿ ಕಥೆ ಮುಂದುವರೆಯುತ್ತಾ ಹೋಯಿತು...  

    ಅನೇಕ ಹೆಸರುಗಳಿಂದ ಸುಸ್ತಾಗಿ, ನನ್ನ ಹೆಸರಿನಿಂದ ಊರ ಹೆಸರಾದ 'ಮಳಲಗಾಂವ್'ನ್ನು ತೆಗೆದು, ಹೆಸರನ್ನು "ಸತೀಶ ರಾಮಕೃಷ್ಣ" ಎಂದು ಮರುನಾಮಕರಣ ಮಾಡೋಣ... ಎಂಬ ಉಪಾಯ ಬಂತು... 

    ಜನನ ದಾಖಲಾತಿ ಆಫೀಸಿನಲ್ಲಿ ಹೆಸರು ಬದಲಾಯಿಸಲು ಕೇಳಿದರೆ, "ನಮಗೆ ಹೆಸರನ್ನು ಬದಲಾವಣೆ ಮಾಡುವ ಅಧಿಕಾರ ಇಲ್ಲ, ಹೊಸ ಹೆಸರಿಗೆ court order ಆಗಬೇಕು" ಎಂದರು...  ನನ್ನ ವಕೀಲರು procedure ಪ್ರಕಾರ ಕೋರ್ಟ್ ನಲ್ಲಿ ನನ್ನ ಹೆಸರನ್ನು ಬದಲಾಯಿಸಲು ದಾವೆ ಹೂಡಿದರು... ನನ್ನ ಹೆಸರು ಎಲ್ಲೆಲ್ಲಿ ಸರಕಾರೀ ಕಡತಗಳಲ್ಲಿ ಬದಲಾಗಬೇಕೋ ಅವರುಗಳಿಗೆಲ್ಲ ನೋಟೀಸ್ ಕೊಟ್ಟರು... procedure ಪ್ರಕಾರ, ನನ್ನ ದಾವೆ ಯನ್ನು ವಿರೋಧಿಸಲು, ಒಬ್ಬ ಪ್ರತಿವಾದಿ ಸರ್ಕಾರೀ ವಕೀಲರು ನೇಮಕಗೊಂಡರು.

    8 ತಿಂಗಳ ನಂತರ, ನಮ್ಮ ದಾವೆಗೆ ದಿನಾಂಕ ಕೂಡಿಬಂದು, ಕೋರ್ಟ್ ಗೆ ಹಾಜರಾತಿ ನೀಡಲು ಹೋದೆ. ಕಟಕಟೆಯಲ್ಲಿ ನಿಂತು "ಸತ್ಯವನ್ನೇ ಹೇಳುತ್ತೇನೆ, ನಾನು ಹೇಳುವದೆಲ್ಲಾ ಸತ್ಯ" ಎಂದು ಆಣೆ ಮಾಡಿದೆ. ನನಗೆ ಇದೆಲ್ಲ ಮೊದಲ ಅನುಭವ! ... ನನ್ನ ದಾವೆಯ ವಿಚಾರಗಳನ್ನು, ಎಲ್ಲಾ ದಾಖಲಾತಿಗಳನ್ನು ಜಡ್ಜ್ ಸರಿಯಾಗಿ ನೋಡಿದರು. ನಮ್ಮ ಅಹವಾಲನ್ನು ಕೇಳಿದರು.

     ಇನ್ನೇನು ನನಗೆ ಹೊಸ ಹೆಸರು ನೀಡಲು ಜಡ್ಜ್ ಮೆಂಟ್ ಕೊಡಬೇಕು ಅನ್ನುವಷ್ಟರಲ್ಲಿ...ಪ್ರತಿವಾದಿ ವಕೀಲ ಎದ್ದು ನಿಂತು... "ಇದಕ್ಕೆ ನನ್ನ ಆಕ್ಷೇಪ ಇದೆ ಯುವರ್ ಹಾನರ್".. ಎನ್ನುತ್ತಾ ತನ್ನ ವರಸೆ ಆರಂಭಿಸಿದ....  ನನ್ನ ಹೆಸರು ನಾನು ಬದಲಾಯಿಸಿಕೊಳ್ಳಲೂ ಪ್ರತಿವಾದಿತ್ವ ಇರುವುದೇ ಎಂದು ಅನ್ನಿಸಿತು !!! 

    ಪ್ರತಿವಾದಿ ವಕೀಲ ನನ್ನ ಹೆಸರಿನ ಬಗ್ಗೆ ಸರಿಯಾಗಿಯೇ ಅಧ್ಯಯನ ಮಾಡಿಯೇ ಬಂದಿದ್ದ. ಅನೇಕ ವಿಚಿತ್ರ ಪ್ರಶ್ನೆಗಳನ್ನು ನನಗೆ ಹಾಕಿ, ನನ್ನ ಹೆಸರಿನ ಮೂಲಗಳನ್ನು ತಿಳಿದುಕೊಂಡ. 

ವಕೀಲ - "೧೦ನೇ ತರಗತಿಯಲ್ಲಿ -ಸತೀಶ್ MR ಎಂದು ಅರ್ಜಿಗೆ ನೀವೇ ಸಹಿ ಹಾಕಿದ್ದೀರೋ?"

ನಾನು - "ನನ್ನಿಂದಲೇ ಹಾಕಿಸಿರಬಹುದು, ನೆನಪಿಲ್ಲ, 20 ವರ್ಷದ ಹಿಂದೆ ಮಾಡಿದ್ದು"

ವಕೀಲ - "ಅಧಾರ್ ಹಾಗೂ ಪಾಸ್ ಪೋರ್ಟಿನಲ್ಲಿ ಹೇಗೆ 'ಸತೀಶ ಮಳಲಗಾಂವ ರಾಮಕೃಷ್ಣ' ಎಂದಾಯಿತು?"

ನಾನು - "ಅವರು MR ಅನ್ನು ವಿಸ್ತರಿಸಿ ಬರೆದರು .. ಪಾಸ್ ಪೋರ್ಟಿನವರು short form ನಲ್ಲಿ ಹೆಸರು ಬರೆಯುವದಿಲ್ಲ"

ಹೀಗೇ ... ವಾದ ಪ್ರತಿವಾದ ಮುಂದುವರೆಯುತ್ತಾ ಹೋಯಿತು ... ಆದರೆ ಪ್ರತಿವಾದಿ ವಕೀಲ ಆವತ್ತು ಎಲ್ಲಿಯದೋ ... ಯಾರದ್ದೋ... ಸಿಟ್ಟನ್ನು ನನ್ನ ಮೇಲೇ ಹಾಕಿದಂತಿತ್ತು :)


ವಕೀಲ - "ಇಲ್ಲ ನೀವು ಆಧಾರ್ ಹಾಗೂ ಪಾಸ್ ಪೋರ್ಟ್ ಅಧಿಕಾರಿಗಳ ಜೊತೆ ಶಾಮೀಲಾಗಿ, ನಿಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದೀರಿ"

ನಾನು - (ದಂಗುಬಡಿದು) .."ಇಲ್ಲ ಇಲ್ಲ.. ಅವರು ನನ್ನ ಹೆಸರನ್ನು ವಿಸ್ತರಿಸಿದ್ದಾರೆ ಅಷ್ಟೇ.. ಬದಲಾಯಿಸಿಲ್ಲ"

ವಕೀಲ - "ಇಷ್ಟು ವರ್ಷ ಈಗಿರುವ ಹೆಸರಿನಿಂದ ಎಲ್ಲ ಸರಕಾರೀ ಸವಲತ್ತು ಗಳನ್ನು ಪಡೆದು, ಈಗ ಹೆಸರು ಬದಲಾಯಿಸಲು ಏಕೆ ಪ್ರಯತ್ನ ಪಡುತ್ತಾ ಇದ್ದೀರಿ.. ಇದರಲ್ಲಿ ಏನೋ ದುರಾಲೋಚನೆ ಇದೆ"

ನಾನು - "ಇಲ್ಲ, ಖಂಡಿತ ಏನೂ ದುರಾಲೋಚನೆ ಇಲ್ಲ..."

ವಕೀಲ - "ಇಲ್ಲ ಇದರಲ್ಲಿ ಏನೋ ಮಸಲತ್ತು ಇದೆ... ಇವರ ನಿಜವಾದ ಹೆಸರು 'ಸತೀಶ್ MR' .. ಅದನ್ನು ಬದಲಾಯಿಸಬಾರದು.... ಅಷ್ಟರಲ್ಲೂ ಕೋರ್ಟಿನಲ್ಲಿ ದಾವೆ ಹೂಡಿ, ನಮ್ಮೆಲ್ಲರ ಸಮಯವನ್ನು ಹಾಳು ಮಾಡಿದ್ದಕ್ಕೆ ದಂಡ ವಿಧಿಸಬೇಕು" !!!

ನಾನು -- "...." ... ಮೌನವಾಗಿಬಿಟ್ಟೆ... ಸುಮ್ಮನೆ ಜಡ್ಜ್ ಮುಖವನ್ನು ನೋಡಿ ಅಸಹಾಯಕನಾಗಿ ನಿಂತೆ!!!

ಜಡ್ಜ್ ಗೆ ನನ್ನ ಪರಿಸ್ಥಿತಿಯ ಅರಿವಾಗಿ -- "ಈ ವಾದಕ್ಕೆ ನಮ್ಮ ಒಪ್ಪಿಗೆ ಇಲ್ಲ ಅಂತ ವಾದಿ ಹೇಳ್ತಾ ಇದಾರೆ ಅಂತಾ ಬರ್ಕೋಳ್ರಿ" ಎಂದು ಟೈಪಿಂಗ್ ಅಸಿಸ್ಟಂಟ್ ಗೆ ಹೇಳಿದರು.

ಮಾನ್ಯ ಕೋರ್ಟ್... ಪ್ರತಿವಾದಿಗಳ ವಾದವನ್ನು ಆಲಿಸಲು ದಾವೆಯನ್ನು ಮತ್ತೊಂದು ತಿಂಗಳಿಗೆ ಮುಂದೂಡಿತು...

(ಮುಂದುವರಿಯುವದು...) 




     

No comments: