Thursday, January 26, 2012
ಯಾಕ್ ಧಾಳಿ
ಯಾವ ಚಾರಣವಾದರೂ ಸರಿ, ಒಮ್ಮೆ ಪರ್ವತದ ಏರನ್ನು ಮುಟ್ಟಿ ತಿರುಗಿ ಇಳಿಯುವಾಗ, ಅಂತೂ ಕಷ್ಟದ ಚಾರಣ ಮುಗಿಯಿತೆಂದು ನೀವು ಅತಿ ನಿರಾಳರಾಗಿರುತ್ತೀರಿ. ನಿಮ್ಮ ಕಾಲುಗಳು ಬಳಲಿ ಸೋತು ಶಕ್ತಿಹೀನವಾಗಿ ಜೋಲುತ್ತಿರುತ್ತವೆ. ಅಂತೂ ಇಂತೂ ಕೆಳಗೆ ಮುಟ್ಟಿ ನಿಮ್ಮ ವಾಹನವನ್ನೋ ಇಲ್ಲ ಮುಂದಿನ ಕ್ಯಾಂಪ್ ಅನ್ನೋ ಮುಟ್ಟಿದರೆ ಸಾಕು ಎಂಬ ತುಡಿತ ಮನದಲ್ಲಿ ತುಂಬಿರುತ್ತದೆ. ಹಾಗೆಯೇ ನಮ್ಮ ಗುಂಪಿನ ಕೃಷ್ಣ, ಮಿಥುನ್, ಸಂದೀಪ್ (ಚಿಕ್ ಹುಡುಗ), ಅರುಣ್, ರಸೂಲ್ ಹಾಗೂ ಇತರ ಚಾರಣಿಗರು ಎಲ್ಲರೂ ನಮ್ಮ ನಮ್ಮ ಪಾಡಿಗೆ ಏನೇನೋ ಹರಟುತ್ತಾ ರೂಪಿನ್ ಪಾಸಿನ ಪರ್ವತದ ಇಳಿಜಾರಿನಲ್ಲಿ ಇಳಿಯುತ್ತಿದ್ದೆವು. ಹಿಮ ಕರಗಿದ ಪರ್ವತಗಳ ಮೈಮೇಲೆ ತೆಳ್ಳನೆಯ ಹಸಿರು ಹುಲ್ಲಿನ ಹೊದಿಕೆ ಸುತ್ತಿಕೊಂಡಿದ್ದರಿಂದ ಬಹುದೂರದವರೆಗಿನ ದೃಶ್ಯಗಳು ಗೋಚರಿಸುತ್ತಿದ್ದವು.
ಹಿಮಾಲಯದ ಹುಲ್ಲಿನಿಂದಾವೃತವಾದ ಬೆಟ್ಟಗಳಲ್ಲಿ ಯಾಕ್ ಮೃಗಗಳು ಗೋಚರಿಸುವದು ಸಾಮಾನ್ಯ. ಆದ್ದರಿಂದ ದೂರದಲ್ಲಿ ನಮ್ಮೆಡೆಗೇ ನೋಡುತ್ತಾ ನಿಂತಿದ್ದ 2 ಬೃಹತ್ ಯಾಕ್ ಮೃಗಗಳನ್ನು ನೋಡಿದರೂ ನಮಗೆ ಅದು ಅಂಥಹಾ ವಿಶೇಷವೆಂದೆನಿಸಲಿಲ್ಲ. ಹಾಗೇ ನಮ್ಮ ಸಹಚಾರಣಿಗರಿಂದ ಸ್ವಲ್ಪ ದೂರದಲ್ಲಿ ನಡೆಯುತ್ತಿದ್ದ ನಮಗೆ "ಹೇ ..ಹೇ... ಓಡ್ರೋ... ಓಡ್ರೋ... ಯಾಕ್ ನಮ್ಮ್ ಕಡೇನೇ ಓಡಿ ಬರ್ತಾ ಇದೆ ಕಣ್ರೋ...!!!" ಎಂದು ಕೂಗುತ್ತಾ ನಮ್ಮೆಡೆಗೆ ಓಡಿ ಬರುತ್ತಿರುವ ಗೆಳೆಯರು ಕಂಡರು... ಅವರ ಹಿಂದೆ ಬೆನ್ನಟ್ಟಿ ಬರುತ್ತಿದ್ದ ಯಾಕ್ ಗಳನ್ನ ನೋಡಿ ನಾವೂ ಕಿತ್ತಾಬಿದ್ದು ಇರುವ ಒಂದೇ ಕಾಲುದಾರಿಯಲ್ಲಿ ಓಡಿದೆವು... ಆದರೆ ಎಲ್ಲೆಂದು ಓಡುವದು? ಒಂದೆಡೆ ಕಡಿದಾದ ಪ್ರಪಾತ. ಇನ್ನೊಂದೆಡೆ ನಮ್ಮಿಂದ ಹತ್ತಲಾಗದ ಬೆಟ್ಟ.!!!
ಪುಣ್ಯಕ್ಕೆ ಸ್ವಲ್ಪದರಲ್ಲೇ ಕುರಿಕಾಯುವ ಕುರುಬರು ಛಳಿಗಾಲಕ್ಕೆಂದು ಮಾಡಿಕೊಂಡಿದ್ದ ಕಲ್ಲಿನ ಮನೆಯೊಂದು ಸಿಕ್ಕಿತು. ನಾನು ಅದರಲ್ಲಿ ಹೊಕ್ಕುತ್ತಿದ್ದಂತೆಯೇ ಅಟ್ಟಿಬರುತ್ತಿದ್ದ ಒಂದು ಬೃಹತ್ ಯಾಕ್ ಓಡಿ ಬರುತ್ತಿದ್ದ ಕೃಷ್ಣನಿಂದ ಒಂದೇ ಮೀಟರ್ ದೂರದಲ್ಲಿ ಇತ್ತು !!!! ಕೂಡಲೇ ಕೈಗೆ ಸಿಕ್ಕಿದ ಒಂದು ದೊಡ್ಡ ಕಲ್ಲನ್ನು ಆ ಯಾಕ್ ಕಡೆಗೆ ಎಸೆದೆ. ಏನಾಯಿತೋ ಏನೊ, ಹತ್ತಾರು ಮನುಷ್ಯರನ್ನು ಅಟ್ಟಿಕೊಂಡು ಬರುತ್ತಿದ್ದ ಎರಡೂ ಯಾಕ್ ಗಳು ನಾವು ಮುಂದೆ ಹೋಗಬೇಕಾಗಿದ್ದ ದಾರಿಯಲ್ಲಿ ಓಡಿದವು.
ಮರುಜೀವ ಸಿಕ್ಕಂತಾದ ನಾವೆಲ್ಲ ಸ್ವಲ್ಪ ಸಮಯ ನಾವೆಲ್ಲ ಸುಧಾರಿಸಿಕೊಂಡು ಯಾಕ್ ಗಳು ಎಲ್ಲಿ ಹೋದವೆಂದು ನೋಡಲು ಸ್ವಲ್ಪ ಮುಂದೆ ಹೋದೆವು. ಆದರೆ ದಿಬ್ಬದ ಆಚೆ ನಿಂತಿದ್ದ ಅವುಗಳು ಮತ್ತೆ ವಿರುದ್ಧ ದಿಕ್ಕಿನಲ್ಲಿ ನಮ್ಮೆಡೆಗೆ ಓಡಿಬರಲಾರಂಭಿಸಿದವು !!! ನಾವೆಲ್ಲಾ ಕೈನಲ್ಲಿ ಕಲ್ಲುಗಳು, ನಮ್ಮ ಚಾರಣದ ಕೋಲುಗಳನ್ನ ಎತ್ತಿತೋರಿಸುತ್ತಾ ಪುರಾತನಕಾಲದ ಸೈನಿಕರಂತೆ "ಹೋಯ್ ಹೋಯ್ ಹೋಯ್ ಹೋಯ್" ಎಂದು ಭಯ-ರುದ್ರಾವೇಷದಲ್ಲಿ ಕಿರುಚತೊಡಗಿದೆವು...!!! ಆದರೂ ಆ ಯಾಕ್ ಗಳು ಏನೂ ಹೆದರದೆ ನಮ್ಮನ್ನೇ ದಿಟ್ಟಿಸಿ ನೋಡುತ್ತಾ ನಿಂತಿದ್ದವು...
ಪರಿಸ್ಥಿತಿ ಹಾಗೇ ಇದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ!. ನಮ್ಮ ಕಿರುಚಾಟವನ್ನು ಕೇಳಿದ ನಮ್ಮ ಗೈಡ್ ದೂರದಿಂದ ತಿರುಗಿ ಓಡಿಬಂದು ಎರಡೂ ಯಾಕ್ ಗಳನ್ನು ಬೆಟ್ಟದ ಮೇಲೆಡೆಗೆ ಓಡಿಸಿದ..
ನಮ್ಮ ಗೈಡ್ ಹೇಳಿದ್ದು, "ಇಲ್ಲಿ ಹಳ್ಳಿಯವರು ಯಾಕ್ ಗಳಿಗೆ ತಿನ್ನಲು ಉಪ್ಪನ್ನು ಕೊಡುತ್ತಾರೆ. ಉಪ್ಪು ಎಂದರೆ ಅವಕ್ಕೆ ಎಲ್ಲಿಲ್ಲದ ಪ್ರೀತಿ. ಆದ್ದರಿಂದ ಅವು ನಿಮ್ಮೆಡೆಗೆ ಓಡಿಬಂದಿರಬೇಕು" ಎಂದು. ಅವರು ಕೊಟ್ಟ ಕಾರಣ ಸಮಂಜಸವಾದರೂ ಒಪ್ಪಿಕೊಳ್ಳುವದು ಅಸಾಧ್ಯವಾಗಿತ್ತು. ಆ ದಿನ ಯಾಕ್ ಗಳು ನಮ್ಮನ್ನು ಅರ್ಥಾತ್ ಅಟ್ಟಿಸಿಕೊಂಡೇ ಬಂದಿದ್ದವು ಎಂಬುದು ನಮ್ಮ ಅನಿಸಿಕೆ. ಯಾಕೆಂದು ಗೊತ್ತಿಲ್ಲ.
ಕಡಿದಾದ ಇಳಿಜಾರು ಪರ್ವತಗಳ ಕಾಲುಹಾದಿಯಲ್ಲಿ, ಬೇಡವಾಗಿದ್ದ ಯಾಕ್ ನ ನಿರೀಕ್ಷೆಯಲ್ಲಿ ಮತ್ತೆ ಮತ್ತೆ ಹಿಂತಿರುಗಿ ಭಯದಿಂದ ನೋಡುತ್ತಾ ನಮ್ಮ ಮುಂದಿನ ಕ್ಯಾಂಪ್ ಕಡೆಗೆ ತೆರಳಿದೆವು.... ಇಂದಿಗೂ ಆ ಘಟನೆಯನ್ನು ನೆನೆಸಿಕೊಂಡರೆ ಕೈಯಲ್ಲಿ ಆಯುಧಗಳಿಲ್ಲದ ಮನುಷ್ಯ ಎಷ್ಟು ನಿಸ್ಸಹಾಯಕ ಎಂಬುದು ಅರಿವಾಗುತ್ತದೆ...
Sunday, June 13, 2010
ರೂಪಕುಂಡ್ ಸರೋವರ ಚಾರಣ : ಡೈರಿಯ ಪುಟಗಳಿಂದ
ಹಿಮಾಚಲ ಪ್ರದೇಶದ ಸರ್ ಪಾಸ್ ಚಾರಣದ ನಂತರ ಸತತವಾಗಿ ತುಡಿಯುತ್ತಿದ್ದ ಇನ್ನೊಂದು ಹಿಮಾಲಯದ ಚಾರಣದ ಆಸೆ ಈ ವರ್ಷದ ರೂಪಕುಂಡ್ (www.roopkund.com) ಚಾರಣದಲ್ಲಿ ಈಡೇರಿತು. ಮಿಥುನ್, ಕೃಷ್ಣ, ಸಂದೀಪ್ ಜೊತೆಗೂಡಿ ಬೆಂಗಳೂರಿನ ಇಂಡಿಯಾಹೈಕ್ಸ್ (www.indiahikes.in) ಎಂಬ ಚಾರಣದ ಆಯೋಜಕರ ಯೋಜನೆಯಂತೆ ಉತ್ತರಾಖಂಡದ ಲೋಹಾಜಂಗ್ ಊರಿನಲ್ಲಿ ಇನ್ನೂ ೧೬ ಚಾರಣಿಗರನ್ನು ಕೂಡಿಕೊಂಡೆವು. ಅಲ್ಲಿಗೆ ತಲುಪಿದ ವಿವರಗಳು ಇಲ್ಲಿ ಅಪ್ರಸ್ತುತವೆಂದೆನಿಸುತ್ತದೆ.

ದಿನ ೧: ಲೋಹಾಜಂಗ್ ನಿಂದ ದಿದನಾ.
ದಿನ ೨: ದಿದನಾ ಇಂದ ಬೆದನಿ ಬುಗ್ಯಾಲ್ (ಅಲಿ ಬುಗ್ಯಾಲ್ ಮೂಲಕ).
ದಿನ ೩: ಬೆದನಿ ಬುಗ್ಯಾಲ್ ಇಂದ ಗೋರಾ ಲೊಟನಿ.
ದಿನ ೪: ಗೋರಾ ಲೊಟನಿ ಇಂದ ಬಾಗುಭಾಸಾ.
ದಿನ ೫: ಬಾಗುಭಾಸಾ ಇಂದ ರೂಪಕುಂಡ. ಮರಳಿ ಬೆದನಿ ಬುಗ್ಯಾಲ್ ಗೆ.
ದಿನ ೬: ಬೆದನಿ ಬುಗ್ಯಾಲ್ ಇಂದ ವಾನ ಗ್ರಾಮ.
Monday, December 8, 2008
ದಬ್ಬೆ ಜಲಪಾತ
ಬೆಂಗಳೂರಿನಲ್ಲಿ ದಿನವಿಡೀ ಕಂಪ್ಯೂಟರನ್ನು ಎವೆಯಿಕ್ಕದೇ ನೋಡುತ್ತಿರುವ ಕಣ್ಣುಗಳಿಗೆ, ದಿನವಿಡೀ ವಾಹನಗಳು ಕಾರುವ ಹೊಗೆಯನ್ನು ಕುಡಿಯುವ ಶ್ವಾಸನಾಳಗಳಿಗೆ, ವರ್ಷವಿಡೀ ಕಿವಿ ಹರಿದುಹೋಗುವಷ್ಟು ಶಬ್ದಾಘಾತಗಳಿಂದ ತತ್ತರಿಸಿಹೋಗುವ ಕಿವಿಗಳಿಗೆ ಏನಾದರೂ ಸಾಂತ್ವನವನ್ನೀಯುವ ಬಗೆ ಬೇಕೇ ಬೇಕಿತ್ತು.
ಕೃಷ್ಣ, ಪ್ರವೀಣ ನಾರಾ, ಮಿಥುನ್ ಯು, ಪ್ರದೀಪ ಕೊಪ್ಪಾ, ಪ್ರಮೋದ nc, ಪವನ್ ಶಾಸ್ತ್ರಿ ಎಲ್ಲಾ ಕೂಡಿಕೊಂಡು ದಬ್ಬೆ ಜಲಪಾತದೆಡೆಗೆ ಹೊರಟೆವು. ಈ ಮೊದಲೇ ಇಲ್ಲಿಗೆ ಚಾರಣಿಸಿದ್ದ ಶ್ರೀಕಾಂತ್ ಅವರ ಮಾರ್ಗದರ್ಶನ ಇದ್ದಿದ್ದರಿಂದ ನಮ್ಮ ಪ್ರಯಾಣದ ಎಲ್ಲಾ ಪೂರ್ವಯೋಜನೆಗಳು ಸುಲಲಿತವಾದವು. ’ನಕ್ಸಲರ ಕಾಟ’ ಎಂಬ ಭಯ ಎಲ್ಲ ಕಡೆ ಆವರಿಸಿರುವದರಿಂದ,”ಶಿವಮೊಗ್ಗದ ಕಡೆ ಕಾಡು ತಿರುಗಲು ಹೊರಟಿದ್ದೇವೆ”, ಎಂದ ಕೂಡಲೇ ನನ್ನ ಅಮ್ಮ ನನಗೊಮ್ಮೆ ಎಚ್ಚರಿಕೆಯ ಸುರಿಮಳೆಗೈದಳು. ’ಪೇಟೆಯಲ್ಲಿ ಭಯೋತ್ಪಾದಕರ ಕಾಟ, ಕಾಡಿನಲ್ಲಿ ನಕ್ಸಲರ ಕಾಟ. ಎಲ್ಲಿ ಹೋದರೂ ಇದ್ದರೂ ತೊಂದರೆ ತಪ್ಪಿದ್ದಲ್ಲ’, ಎಂದು ಹೇಳಿ ನಾನೂ ಕೈ ತೊಳೆದುಕೊಂಡೆ:-)
ರಾತ್ರಿಯ ಶಿವಮೊಗ್ಗೆಯ ರೈಲು ಬಳಸಿ, ಸಾಗರದಲ್ಲಿ ತಿಂಡಿ ತಿಂದು, ಕಾರ್ಗಲ್(ಸಾಗರದಿಂದ ಜೋಗದ ರಸ್ತೆ, 20km) ಎಂಬ ಊರಿಗೆ ಬಸ್ಸಿನಲ್ಲಿ ಬಂದೆವು. ಇಲ್ಲಿಂದ ಭಟ್ಕಳ ರಸ್ತೆಯಲ್ಲಿ ಹೊಸಗದ್ದೆ (ಕಾರ್ಗಲ್ ನಿಂದ 20km, ಭಟ್ಕಳದ ಕಡೆಗೆ) ಎಂಬ ಊರಿನಲ್ಲಿ ಇಳಿದುಕೊಂಡು ಸುಮಾರು ಆರು ಕಿಮಿ ಇರುವ ದಬ್ಬೆಯ ಜೋಗದ ಕಡೆ ನಡೆದೆವು.
ದಾರಿಯುದ್ದಕ್ಕೂ ಸಿಕ್ಕುತ್ತಿದ್ದ ಹರಣಿ ನೀರಿನಲ್ಲಿ ಆಟವಾಡುತ್ತಾ, ಕಿರು ಜಲಪಾತಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುತ್ತಾ ಮುಂದೆ ಸಾಗುತ್ತಿದ್ದೆವು. ಆದರೆ ದಾರಿಯುದ್ದಕ್ಕೂ ಇದ್ದ ಅನೇಕ ತಿರುವುಗಳು ನಮ್ಮನ್ನು ಬಹಳ ಸುಲಭವಾಗಿ ದಾರಿತಪ್ಪಿಸುವಂತಿದ್ದವು. ದಬ್ಬೆ ಜಲಪಾತದಷ್ಟೇ ಹೆಸರು ಮಾಡಿದವರೆಂದರೆ ದಬ್ಬೆಮನೆಯ ಮಂಜುನಾಥ ಗೌಡರು. ಇವರ ಮನೆಯ ಎದುರಿನ ಗದ್ದೆಯಂಚಿನಲ್ಲೇ ಕೆಳಗಡೆ ಜಲಪಾತವಿರುವದರಿಂದ, ಬಂದ ಚಾರಣಿಗರಿಗೆ ಊಟ, ವಸತಿ ಇತ್ಯಾದಿ ಇವರ ಮನೆಯಲ್ಲೇ ನೆರವೇರುತ್ತದೆ. ಆದ್ದರಿಂದ ದಾರಿಯುದ್ದಕ್ಕೂ ಕಂಡಕಂಡವರಲ್ಲೆಲ್ಲಾ "ಹೊಯ್... ಮಾರಯ್ರೆ...ಗೌಡ್ರ ಮನೆಗೆ ದಾರಿ ಹೆಂಗೆ...?" ಎಂದು ವಿಚಾರಿಸುತ್ತಿದ್ದೆವು.
ಅಂತೂ ಗೌಡರ ಮನೆಗೆ ಬರುವಷ್ಟರಲ್ಲೇ ಮಧ್ಯಾಹ್ನವಾಗಿತ್ತು. ’ಕೊನೆಯಲ್ಲಿ ಬೇಕಾಗಬಹುದು’ ಎಂದು ಗೌಡರು ಕೊಟ್ಟ ಹಗ್ಗವನ್ನು ಹೆಗಲಿಗೆ ಏರಿಸಿ ಭತ್ತದ ಗೆದ್ದೆಯ ತುದಿಯಿಂದ ಕೆಳಗೆ ಇಳಿಯಲು ಶುರು ಮಾಡಿದೆವು. ಸುಮಾರು ಅರ್ಧ ಕಿಮಿಯಷ್ಟು ಲಂಬವಾಗಿ ಗದ್ದೆಯ ನೆತ್ತಿಯಿಂದ ಇಳಿಯಬೇಕು. ಕೇವಲ ಮರಗಳ ಹಾಗೂ ಬಳ್ಳಿಗಳ ಕಾಂಡದ ಸಹಾಯದಿಂದ ಕೆಳಗೆ ಸಾವಧಾನವಾಗಿ ಇಳಿಯುತ್ತಿದ್ದ ಅನುಭವವಂತೂ ’ಸಖತ್’. ಕೆಲವೊಮ್ಮೆ ನೀವು ಕೈಯಲ್ಲಿ ಹಿಡಿದಿರುವದು ಬಳ್ಳಿಯೋ ಅಥವಾ ಹಾವೋ ಎಂದು ಗೊಂದಲವಾಗುತ್ತಿತ್ತು.!!! ದಾರಿಯುದ್ದಕ್ಕೂ ಹಾವಿನ ಹಾಗೂ ಯಾವಾಗ ಬೇಕಾದರೂ ಆಕ್ರಮಣ ಮಾಡಬಲ್ಲಂತಹ ಕರಡಿಯ ಅಸ್ತಿತ್ವದ ಬಗ್ಗೆ ಒಂದು ಲಕ್ಷ್ಯವನ್ನಿಟ್ಟುಕೊಂಡೇ ಕೆಳಗೆ ಇಳಿದೆವು.
ದಬ್ಬೆಯ ವೈಶಿಷ್ಟ್ಯವೆಂದರೆ ಕೆಳವರೆಗೆ ನೀವು ಇಳಿಯುವವರೆಗೂ ಜಲಪಾತ ಗೋಚರಿಸುವದಿಲ್ಲ. ಆದರೆ ಸುಮಾರು 20-30 ಅಡಿಗಳಷ್ಟು ಎತ್ತರ ಬಾಕಿ ಇರುವಾಗ ಇದು ಹಠಾತ್ತಾಗಿ ಗೋಚರಿಸುತ್ತದೆ. ಆ ದೃಶ್ಯದ ವೈಭವವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಪ್ರದೀಪ ಹೇಳುವಂತೆ, ’’God levellu magaa... God levallu..."!!!.
ಎಲ್ಲರೂ ಉತ್ಸಾಹಭರಿತರಾಗಿ ನೀರಿನಲ್ಲಿ ಆಟ-ಸ್ನಾನಗಳನ್ನು ಮುಗಿಸಿ ಸ್ವಲ್ಪ ಸಮಯ ಪೃಕೃತಿಯ ಸವಿಯನ್ನು ಸವಿಯುತ್ತಾ ಅಲ್ಲೇ ಕಳೆದೆವು.
ಗಾಳಿಯ ರಭಸಕ್ಕೆನೀರು ಸಿಡಿಯುವದರಿಂದ
ಹತ್ತಿರದವರೆಗೆ
ಕ್ಯಾಮೆರಾ
ತರಲಾಗುವದಿಲ್ಲ.
ಮತ್ತೆ ತಿರುಗಿ ಬೆಟ್ಟವನ್ನು ಹತ್ತಿ ಬರುವಷ್ಟರಲ್ಲಿ ಎಲ್ಲರ ಹೊಟ್ಟೆ ನಿರ್ವಾತವಾಗಿದ್ದರೂ, ಮನಸ್ಸು ಮಾತ್ರ ಗೌಡರ ಮನೆಯಲ್ಲಿ ಆಗಲೇ ತಯಾರಾಗಿದ್ದ ಬಿಸಿಬಿಸಿ ಅನ್ನ-ಸಾರು, ಮಜ್ಜಿಗೆ, ಕಡಿ ಉಪ್ಪು, ಮಿಡಿ ಉಪ್ಪಿನಕಾಯಿ ಇವನ್ನೆಲ್ಲಾ ಮೇಯುವ ಆಸೆಯಿಂದ ಉಲ್ಲಸಿತವಾಗಿತ್ತು.
ಗೌಡರ ಮನೆಯ ಗದ್ದೆಯಲ್ಲಿ ಕ್ಲಿಕ್ಕಿಸಿದ ಭತ್ತದ ತೆನೆ >>
<< ಗೌಡರ ಮನೆಯ ಹಸಿ ಅಡಿಕೆ.
ಒಟ್ಟಿನಲ್ಲಿ ದಬ್ಬೆಜೋಗ ಒಂದು ದಿನದ ಚಾರಣಕ್ಕೆ ಅತಿಸೂಕ್ತವಾದ ಜಾಗ. ಬೇಕಷ್ಟು ನಡಿಗೆ, ಕಾಡು, ಇಳಿಯುವದು, ಹತ್ತುವದು, ಕೆಲವೊಂದು ಕಡೆ ಸವಾಲುಹಾಕುವಷ್ಟು. ಒಟ್ಟಿನಲ್ಲಿ ನಮಗಿರುವ ಪೃಕೃತಿಯ ಜೊತೆಗಿನ ಒಡನಾಟದ ಬಯಕೆ ಕೊಂಚವಾದರೂ ಈಡೇರುವದರಲ್ಲಿ ಸಂಶಯವಿಲ್ಲ.
ಹಾಗೆಯೇ ನಮ್ಮ ಮುಂದಿನ ಹವಣಿಕೆಯ ಪ್ರಕಾರ ಮತ್ತೆ ಸಾಗರದತ್ತ ಪ್ರಯಾಣಿಸಲು, ವ್ಯಾನೊಂದನ್ನು ಬಾಡಿಗೆಗೆ ಪಡೆಯಲು ಪಕ್ಕದ ಊರಾದ ಕೊಡ್ಲಕೆರೆಯ ಇನ್ನೊಂದು ಗೌಡರ ಮನೆಯತ್ತ ಬೆಳದಿಂಗಳಿನಲ್ಲಿ ನಡೆದೆವು.
ದಬ್ಬೆ ಜೋಗಕ್ಕೆ ನೀವೂ ಹೋಗಿಬನ್ನಿ. ಆನಂದಿಸಿ.
Saturday, June 14, 2008
ಹಿಮಾಲಯದತ್ತ .........
ಸರ್-ಪಾಸ್ …..
ಆ ದಿನ .... ಕಸೋಲಿನಲ್ಲಿ 72 ವರ್ಷದ ಬಸವರಾಜ ಅಂಕಲ್ ಸರ್-ಪಾಸ್ ಚಾರಣಕ್ಕೆ ಬಂದ ಇಸ್ರೇಲಿನ ಯುವಕನೊಬ್ಬನಿಗೆ ಹೇಳುತ್ತಿದ್ದರು, "ಭಾರತದಲ್ಲಿ ಒಂದು ಹಳೆಯ ಹೇಳಿಕೆ ಇದೆ. ನೀವು ಸಮುದ್ರವನ್ನೂ ಮತ್ತು ಹಿಮಾಲಯವನ್ನೂ ಕಣ್ಣಾರೆ ನೋಡಿದ ವಿನಹ ಅವುಗಳ ಗಾಂಭೀರ್ಯತೆ, ವಿಶಾಲತೆ, ಆಳವನ್ನು ಅಳೆಯಲಾಗಲೀ ವರ್ಣಿಸಲಾಗಲೀ ಸಾಧ್ಯವಿಲ್ಲ" ಎಂದು. ಆ ಕ್ಷಣದಲ್ಲೊಮ್ಮೆ ನನಗದು ಅಷ್ಟು ಬಲವಾಗಿ ನಾಟಲಿಲ್ಲ. ಆದರೆ ಈಗ ನನ್ನಲ್ಲಿ ಹಿಮಾಲಯದ ಬಗ್ಗೆ ವರ್ಣಿಸಲು ಬಹಳ ಶಬ್ದಗಳೂ ಉಳಿಯಲಿಲ್ಲ.
ಚಾರಣದ ಬಗ್ಗೆ ನಾನಿನ್ನೂ ಬರೆದಿಲ್ಲವಾದ್ದರಿಂದ ನಮ್ಮ "ಟ್ರೆಕ್ಕಿಂಗ್ ಬಾಯ್ಸ್" ಬಗ್ಗೆ ಒಂದೆರಡು ಮಾತನ್ನ ಹೇಳಿಬಿಡುತ್ತೇನೆ.
ಪ್ರವೀಣ (ಇವರು ನಾರಾ ಎಂದೇ ಪ್ರಸಿದ್ಧರು) , ಕ್ರಿಷ್ಣ, ರಸೂಲ, ಚೇತನ್, ಪ್ರದೀಪ(ಕೊಪ್ಪ), ರಾಧೇಶ, ಪ್ರಮೋದ, ವಿಕಾಸ ರೆಡ್ಡಿ, ಮಿಥುನ್ ಇವರುಗಳೆಲ್ಲಾ ಬಹಳ ಉತ್ಸಾಹಭರಿತ ಚಾರಣಿಗರು. ಪಶ್ಚಿಮ ಘಟ್ಟಗಳ ಎಲ್ಲಾ ಗುಡ್ಡಗಳನ್ನು ಹತ್ತಿ ಇಳಿಯುವದೂ ಒಂದು ಚಟವೇ ಬಿಡಿ:-). ಆದರೆ ಹಿಮಾಲಯ ಒಂದು ವಿಶೇಷ ಆಕರ್ಷಣೆಯೇ ಸರಿ. ಎಲ್ಲರೂ ಸುಮಾರು ಒಂದು ವರ್ಷದಿಂದ ಹಿಮಾಲಯದ ಚಾರಣಕ್ಕೆ ಗುರಿಯಿಡುತ್ತಿದ್ದೆವು. ಆದರೆ ಕಾರಣಾಂತರಗಳಿಂದ ನಾವು ೬ ಜನ ಮಾತ್ರ ಈ ಸಲದ (may 2nd batch, SarPass trek, Organized by Youth Hostel association of India) ಸರ್-ಪಾಸ್ ಚಾರಣಕ್ಕೆ ತೆರಳಲು ಸಕಲ ಸಿದ್ಧತೆಗಳನ್ನೂ ನಡೆಸಿದೆವು.
ದಿಲ್ಲಿಗೆ ತೆರಳಿ ಅಲ್ಲಿಂದ ಹಿಮಾಚಲ ಪ್ರದೇಶದ ಕುಲು ಕಣಿವೆಯತ್ತ ಬಸ್ಸಲ್ಲಿ ಪಯಣಿಸಿದೆವು. ದಾರಿಯಗುಂಟ "ಬಿಯಾಸ್" ನದಿಯ ಪ್ರಪಾತ ಹಾಗೂ ಅಲ್ಲಿನ ಬೆಟ್ಟಗುಡ್ಡಗಳು ನಮ್ಮನ್ನು ಸ್ವಾಗತಿಸಿದವು. ಆದರೆ ಆ ಪ್ರಪಾತದ ಅಂಚಿನಲ್ಲಿ ಬಸ್ಸು ಸಾಗುತ್ತಿರುವಾಗ ನನಗೆ ಮಾತ್ರ ಜೀವ ಅರ್ಧ ಕೈಯಲ್ಲಿ ಬಂದಿತ್ತು. ಆದರೆ ಉಳಿದ ೧೪-೧೫ ದಿನಗಳನ್ನು ಅಂಥಹ ಕಣಿವೆ-ಪ್ರಪಾತಗಳಿರುವ ದೇಶದಲ್ಲೇ ಕಳೆದ ಮೇಲೆ, ಪ್ರಪಾತದ ಅಂಚಿನಲ್ಲಿ ಸಾಗುವದು ಅಷ್ಟೇನೂ ಅಂಜಿಕೆ ತರಲಿಲ್ಲ.
ನಮ್ಮ ಬೇಸ್ ಕ್ಯಾಂಪ್ ಇದ್ದಿದ್ದು ಕಸೋಲ್ ಎಂಬ ಊರಲ್ಲಿ. ಇದು ನೀವು ಕುಲುವಿಂದ ಭುಂತರ್ ಊರಿನ ಮುಖಾಂತರ ಮಣಿಕರ್ಣಕ್ಕೆ ಹೋಗುವಾಗ ೫ ಕಿಮಿ ಹಿಂದೆ ನಿಮಗಿದು ಎದುರಾಗುತ್ತದೆ. ಸುತ್ತಲೂ ಮುತ್ತಿಕೊಂಡ ಮುಗಿಲೆತ್ತರದ ಬೆಟ್ಟಗಳು. ಅಲ್ಲೊಂದು ಸಣ್ಣ ಊರು ಇದು. ಯಾವಗಲೂ ಇಸ್ರೇಲಿ ಪ್ರವಾಸಿಗರು ತುಂಬಿರುವ ಜಾಗ. ಪಕ್ಕದಲ್ಲೇ ಹರಿಯುವ ಪಾರ್ವತಿ ನದಿ. ಅಲ್ಲೇ ಇರುವ ಯುತ್ ಹಾಸ್ಟೇಲಿನ ಬೇಸ್ ಕ್ಯಾಂಪನಲ್ಲಿ ಮೇ ೨ ರಂದು ತೂರಿಕೊಂಡೆವು.
ನಿಮಗೆ ನಾನು ಯೂತ್-ಹಾಸ್ಟೇಲ್ ಬಗ್ಗೆ ಸ್ವಲ್ಪ ಹೇಳಲೇಬೇಕು. ಎಲ್ಲಾ ದೇಶಗಳಲ್ಲೂ,ಸುಮಾರಿಗೆ ಎಲ್ಲಾ ನಗರಗಳಲ್ಲೂ ತನ್ನ ಶಾಖೆಗಳನ್ನು ಹೊಂದಿದೆ. ದೇಶ ಹಾಗೂ ಅಂತರರಾಷ್ಟ್ರೀಯ ಏಕತೆಗಳನ್ನು ಯುವಜನರಲ್ಲಿ ಮೂಡಿಸುವುದು ಹಾಗೂ ಪ್ರಕ್ರ್ತಿಯ ಬಗ್ಗೆ ಜನರಲ್ಲಿ ಜಾಗ್ರತಿ ಹಾಗೂ ಸಖ್ಯತೆಯನ್ನು ಬೆಳೆಸುವದು ಇದರ ಉದ್ದೇಶಗಳಲ್ಲಿ ಕೂಡಿವೆ. ಭಾರತೀಯ ಸರಕಾರ ಇದರ ಚಾರಣ ಹಾಗೂ ಸಾಹಸದ ಕಾರ್ಯಕ್ರಮಗಳಿಗೆ ಧನಸಹಾಯ ನೀಡುತ್ತದೆ. ಆದ್ದರಿಂದ ಮಧ್ಯಮ ವರ್ಗದ ಜನರೂ ಸಹ ಸುಲಭವಾಗಿ ದೇಶದ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸಬಹುದು. ಇದರ ಅಂತರ್ಜಾಲದ ದಾರಿ... .
ಹಾಗೇ ಇನ್ನು ನಮ್ಮ ಚಾರಣದ ಕಥೆ ನಿಮ್ಮ ಮುಂದೆ ತೆರೆಯುತ್ತದೆ.
ದಿನ 1.(ಮೇ ೨, ೨೦೦೮):-
ಅಂದು ಕುಲುವಿನಿಂದ ಕಸೋಲಿನಲ್ಲಿನ ಬೇಸ್-ಕ್ಯಾಂಪಿನಲ್ಲಿ ’report’ ಮಾಡಿಕೊಂಡೆವು.
ನಮಗೆ ’allot’ ಆದ ಟೆಂಟಿನಲ್ಲಿ ನಮ್ಮ ಬ್ಯಾಗುಗಳನ್ನು ಇಳಿಸಿ, ಕಸೋಲಿನಲ್ಲಿ ಎನಾದರೂ ಶಾಪಿಂಗ್ ಮಾಡೋಣವೆಂದುಕೊಂಡೆವು. ಆದರೆ ನಾವು ಅಂದುಕೊಂಡಂತೆ ನಮ್ಮ ಯಲ್ಲಾಪುರವೋ ಅಥವಾ ಸಿರಸಿ ಪೇಟೆಯಂತೆ ಇರುವದಿಲ್ಲ ಹಿಮದ ತಪ್ಪಲಿನಲ್ಲಿರುವ ’city’ ಗಳು ಎಂದು ಅಲ್ಲಿಗೆ ಹೋದ ಮೇಲೇ ಗೊತ್ತಾಗಿದ್ದುJ. ಅತೀ ಅವಶ್ಯವಾಗಿದ್ದ ಜೊತೆ ಚಪ್ಪಲಿಯೂ ಸಿಗದೇ, ಅಂತೂ ಕೊನೆಗೆ ಸಿಕ್ಕಿದ 8 ನಂಬರಿನ ಜೋಡಿಗೆ 100 ರೂಪಾಯಿ ಕೊಟ್ಟು ಕೊಂಡೆವು.!! ಹಾಗೇ ಅಲ್ಲೊಂದು ಸಣ್ಣ ಹೊಟೇಲಿನಲ್ಲಿ ಕುಡಿದ ಆಡಿನ ಹಾಲಂತೂ ಅದ್ಭುತವಾಗಿತ್ತು.
ನಮ್ಮ ಒಂದೊಂದೂ ಟೆಂಟುಗಳಲ್ಲಿ 15-16 ಜನರನ್ನು ತುಂಬಿಸಿದ್ದರು. ಮಲಗಲು ಜಾಗ ಅಥವಾ ನಮ್ಮ ಹೊರೆಗಳನ್ನು ಇಡಲು ಇರುವ ಜಾಗ ಎಂದೆಲ್ಲಾ ಇರಲಿಲ್ಲ. ಹೇಗೋ 3x6 ಅಡಿ ಜಾಗ ಸಿಕ್ಕರೆ ಸಾಕು ಎಂಬಂಥಾ ಸ್ಥಿತಿJ. ಕಸೋಲ್ ಇದ್ದಿದ್ದೇ 7,500 ಅಡಿ ಎತ್ತರದಲ್ಲಿ. ನಮಗೆ ಸಿಗುತ್ತಿದ್ದ ನೀರೂ ಸಹಾ ಅತೀ ಥಂಡಿಯಾಗಿರುತ್ತಿತ್ತು. ಸ್ನಾನದ ಬಗ್ಗೆ ಯೋಚಿಸುವಂತೆಯೂ ಇರಲಿಲ್ಲ. ಇನ್ನು 12 ದಿನ ನಮ್ಮ ಚಾರಣ ಮುಗಿಯುವವರೆಗೆ ಸ್ನಾನದ “ತಲೆಬಿಸಿ” ಇಲ್ಲವೆಂದು ನನಗೆ ಬಹಳ ನಿರಾಳವಾಯಿತುJ.
ಇನ್ನು ಊಟದ ಬಗ್ಗೆ ಅಂತೂ ಕೇಳಲೇಬೇಡಿ. ದೆಹಲಿಯಿಂದ ಕುಲುವಿಗೆ ತೆರಳುವ ದಾರಿಯಲ್ಲೇ ಬಹಳ ಚಿಂತಿತನಾಗಿದ್ದೆ. ಆಗ ತಾನೇ “Food Poisoning” ಇಂದ 10 ದಿನದ ರಜೆಯನ್ನು ಖಾಲಿಮಾಡಿದ್ದೆ. ಅದಕ್ಕಿಂತಲೂ ಮುಖ್ಯವಾಗಿ 5 KG ಇಳಿದಿದ್ದೆ. ಇದು ನನ್ನನ್ನು ಮಾನಸಿಕವಾಗಿ ಬಹಳ ತಳಮಳಗೊಳಿಸಿತ್ತು. ಅದೂ ಡಾಕ್ಟರ್ ಹೇಳಿದ ಹಾಗೂ ನನಗೆ ಅತಿ ಪ್ರಿಯವಾದ ಅನ್ನವನ್ನು ತಿನ್ನಲು ಇರುವ ಎಲ್ಲಾ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದೆJ. ಆದರೆ ಉತ್ತರ ಭಾರತದಲ್ಲಿ ಅನ್ನವನ್ನು ಆಹಾರದಲ್ಲಿ ಬಳಸುವದು ಬಹಳ ಕಡಿಮೆ. ಅದರಲ್ಲೂ ಅನ್ನವನ್ನು ಅರ್ಧ ಬೇಯಿಸಿರುವದರಿಂದ ಅದನ್ನು ತಿಂದರೆ ನಮಗಾಗುವ ಹಾನಿಯೇ ಹೆಚ್ಚು. ಇದನ್ನೆಲ್ಲಾ ನನ್ನ ಆಫೀಸಿನ ಸೀನಿಯರ್ ಗಳಾದ ಹಾಗೂ ಸಹಚಾರಣಿಗರೂ ಆಗಿದ್ದ ಕ್ರಿಷ್ಣ, ಮಿಥುನ್, ಚೇತನ್, ರಾಧೇಶ್, ಪ್ರಮೋದ್ ಇವರೆಲ್ಲಾ ತಿಳಿಸಿ ಹೇಳಿದ್ದರಿಂದ ಕೊನೆಗೆ ರೋಟಿ-ಆಲೂ ವನ್ನೇ ತಿಂದು ಬದುಕಲು ನಿರ್ಧರಿಸಿದೆJ.
ಬೇಸ್ ಕ್ಯಾಂಪಿನಲ್ಲಿ ಸಂಜೆಯ ಊಟದ ನಂತರ ಇದ್ದ ’ಕ್ಯಾಂಪ್-ಫೈರ್’ ನಲ್ಲಿ ಎಲ್ಲರ ಪ್ರತಿಭೆಗಳು ಹೊರಬರುತ್ತಿದ್ದವು. ಅದರಲ್ಲೂ ಪ್ರಮೋದ್ ಹಾಡುತ್ತಿದ್ದ ಹಳೆಯ ಹಿಂದೀ ಹಾಡುಗಳು ಎಲ್ಲರನ್ನು ಮೋಡಿಗೊಳಿಸುತ್ತಿದ್ದವು.
ದಿನ 2.(ಮೇ ೩, ೨೦೦೮):- ಬಹಳ ವಿರಳವಾದ ತೊಂದರೆ ಎಂದರೆ “High Altitude Sickness”. ಕೆಲವರಿಗೆ ಎತ್ತರದ ಪ್ರದೇಶಗಳಿಗೆ ಹೋದಂತೆ ತಲೆಸುತ್ತುವದು,ವಾಂತಿ,ಜ್ವರ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಏನೂ ಮದ್ದಿಲ್ಲ.ಸದ್ಯಕ್ಕೆ. ಇದರ ಪರೀಕ್ಷೆಗೆಂದು ನಮ್ಮನ್ನು ಸುಮಾರು 1000ft ಎತ್ತರಕ್ಕೆ ನಮ್ಮನ್ನು ಕರೆದೊಯ್ದರು. ನಮ್ಮ ಟೀಮ್ – ಲೀಡರ್ ಆದ ಮೋಹನ್( ಇವರು ಮೈಸೂರಿನವರು. ನ್ಯಾಚುರಲಿಸ್ಟ್) ಹಾಗೂ ಇನ್ನೊಬ್ಬ ಅನುಭವಿ ಚಾರಣಿಗರಾದ ಸೋಲಂಕಿಯವರ ಪರಿಚಯ ಚೆನ್ನಾಗಿ ಆಯಿತು.
ದಿನ 3.(ಮೇ ೪, ೨೦೦೮):- ಹೆಸರಿಗೆ ’ಬರ್ಡ್ ವಾಚಿಂಗ್’ ಎಂಬ ಕಾರ್ಯಕ್ರಮ. ಅಮೇಲೆ ’ರಾಕ್ -ಕ್ಲೈಂಬಿಂಗ್’ ಕಾರ್ಯಕ್ರಮ ಗಳು. ಆದರೆ ನಮ್ಮ ಟೀಮಿನಲ್ಲಿ ತುಂಬಾ ಜನರಿದ್ದಿದ್ದರಿಂದ ನಾನು ಮತ್ತು ಕಾಲನ್ನು ಉಳುಕಿಸಿಕೊಂಡಿದ್ದ ಮಿಥುನ್ ಇಬ್ಬರೂ ಸುಮಾರು ಹೊತ್ತು ಅಲ್ಲೇ ಹರಿಯುತ್ತಿದ್ದ ನದಿಯ ನೀರಿನ ಫೊಟೋಗ್ರಫಿ ಮಾಡಿದೆವು. ಹಾಗೆಯೇ ನಾನು ಗಮನಿಸಿದ ಅಂಶವೆಂದರೆ ಅಲ್ಲಿಯ ನದಿಯ ನೀರು ಬಿಳಿಯ ಹಾಲಿನಂತಿರುವದು. ಅದು ಆಗ ತಾನೇ ಹಿಮದಿಂದ ಕರಗಿದ ನೀರಾಗಿದ್ದರಿಂದಲೋ ಏನೋ. ಅಲ್ಲಿಯ ನದಿಯಲ್ಲಿ ಸಿಗುವ ಕಲ್ಲುಗಳೂ ಸಾಮಾನ್ಯವಾಗಿ ಬಿಳಿಯತ್ತ ತಿರುಗಿದ್ದವು.
ಹಾಗೆಯೇ ಕಸೋಲಿನ ಪೇಟೆಯಲ್ಲಿ ನಾಲ್ಕಾರು ರೌಂಡು ಹೊಡೆದು, ಪಾರ್ವತೀ ನದಿಯ ಮೇಲಿರುವ ಸಣ್ಣದೊಂದು ತೂಗು ಸೇತುವೆ ಹತ್ತಿರ ಸ್ವಲ್ಪ ಅಡ್ಡಾಡಿ ಬಂದೆವು. ಮೈಮೇಲೆ ತುಂಡು ಕಾವಿಯ ಧರಿಸಿ ತಿರುಗಾಡುವ ಸನ್ಯಾಸಿಗಳನ್ನು ನೋಡುತ್ತಾ ನಿಮಗೆ ನಿಮ್ಮ ಆಶ್ಚರ್ಯದ ದೃಷ್ಟಿಯನ್ನು ಬಿಗಿಹಿಡಿಯಲಾಗುವದಿಲ್ಲ. ಸನ್ಯಾಸಿಗಳಂತೆಯೇ ವೇಷಧಾರಿಗಳಾಗಿ ತಿರುಗುವ ’ಫ಼ಾರಿನರ್ಸ್’ ಗಳಿಗೇನೂ ಕಮ್ಮಿಯಿಲ್ಲ. ಅನೇಕ ಜನರ ಅಭಿಪ್ರಾಯವೆಂದರೆ ಹಿಮಾಲಯದ ಬಗೆಗೆ ಜಗತ್ತಿನ ಎಲ್ಲಾ ದೇಶದ ಜನರಿಗೂ ಒಂದು ಥರಹ ಕುತೂಹಲ. ಅದಕ್ಕೇ ಇಲ್ಲಿನ ಸನ್ಯಾಸಿಗಳ ಬಗೆಗಂತೂ ವಿಪರೀತ. ಅದರೆ ಇಲ್ಲಿ ಯಾರು ಹಿತವರೆಂದು ಅರಿಯುವದು ’ಮಿಲಿಯನ್ ಡಾಲರ್’ ಪ್ರಶ್ನೆ.!!
ಕ್ಯಾಮೆರಾದ ಮ್ಯಾನುಯಲ್ ನಲ್ಲಿ ಬರೆದ ಪ್ರಕಾರ, ಕೇವಲ ’{5 to 45}' ಡಿಗ್ರಿವರೆಗೆ ಮಾತ್ರ ಅದು ಸರಿಯಾಗಿ ಕೆಲಸ ಮಾಡುತ್ತದೆ. ಹಾಗೆಯೇ ಮುಂಬರುವ ಹತ್ತು ದಿನಗಳಲ್ಲಿ ನಮಗೆ ಚಾರ್ಜ್ ಮಾಡಲು ಕರೆಂಟು ಸಿಗುವ ಸಾಧ್ಯತೆಯೇ ಇರಲಿಲ್ಲ. ಅಲ್ಲಿನ ವಿಪರೀತ ಛಳಿಗೆ ಬ್ಯಾಟರಿ ಬೇಗಬೇಗನೇ ಕರಗುತ್ತಿತ್ತು. ನನ್ನ ಹಾಗೇ ಇದು ಎಲ್ಲರ ಗೋಳೂ ಆಗಿತ್ತು. ಚಾರ್ಜಿಂಗ್ ಪಾಯಿಂಟ್ ಕೇವಲ ಐದೇ ಇದ್ದದ್ದರಿಂದ ಹಾಗೂ ಅಷ್ಟರಲ್ಲೇ ತಮ್ಮ ಮೊಬೈಲ್ ಹಾಗೂ ಕ್ಯಾಮೆರಾ ಚಾರ್ಜ್ ಮಾಡುವ ಅಭ್ಯರ್ಥಿಗಳ ಸಂಖ್ಯೆ ನೂರರ ಮೇಲಿದ್ದರಿಂದ, ಕ್ಯಾಮೆರಾದ ಬ್ಯಾಟರಿಯನ್ನು ಚಾರ್ಜ್ ಮಾಡಿ ಇಟ್ಟುಕೊಳ್ಳುವದೂ ಒಂದು ಹರಸಾಹಸವೇ ಆಯಿತು.!!!
ಅಂದು ರಾತ್ರಿ ಅಂತೂ ನಾಳೆ ಬೆಟ್ಟ ಹತ್ತಲು ಶುರು ಮಾಡುವದು ಎಂದು ಮರುದಿನದ ಬೆಳಿಗ್ಗೆಯನ್ನೇ ಕಾಯುತ್ತಾ ನಿದ್ರೆಹೋದೆವು...
This Video in youtube is just a try for capturing all the moments in ten mins.
