ನಮ್ಮ ದೊಡ್ಡಣ್ಣನಾದ ಸುಬ್ಬಣ್ಣನ ಮದುವೆಗೆಂದು ಮೈಸೂರಿನಿಂದ ಸಹಪಾಠಿಗಳಾದ ಕಾರ್ತಿಕ್, ರಂಗ, ಕಾವಾ, ಅಜಿತ್ ಇವರು ಮಳಲಗಾಂವ್ ಗೆ ಬಂದಾಗಿನ ಕಥೆ.
ಮಲೆನಾಡ ನೋಡಬೇಕು, ಅಲ್ಲಿನ ಸೌಂದರ್ಯವನ್ನು ಸವಿಯಬೇಕೆಂಬ ಆಸೆ ಅವರದು. ಅದರಂತೇ ಗಾಂವ್ಕಾರ ಭಾವನ ಜೀಪಿನಲ್ಲಿ ಸಾತೊಡ್ಡಿ, ಮಾಗೋಡು ಜಲಪಾತಗಳನ್ನು ಸುತ್ತಿದ್ದೂ ಆಯಿತು. ಮದುವೆ ಹಿಂದಿನ ದಿನ ರಾತ್ರಿ 10 ಗಂಟೆ ಆಗಿರಬಹುದು. "ಮಗಾ ಇಲ್ಲೇ ಒಂದು ಕಿಲೋಮೀಟರ್ ನಡೆದು ಡಾಂಬರ್ ರಸ್ತೆಯ ಬಳಿಗೆ ಒಂದು ವಾಕ್ ಹೋಗಿ ಬರೋಣ್ವಾ? ಅಲ್ಲಿ ಪರ್ಸು ಅಂತ ನಮ್ಮ ಕೆಲಸದವನ ಬಿಡಾರ ಇದೆ. ಅವನು ಸೈಕಲ್ ಟೈರ್ ನ ಪಂಜು (ಸೂಡಿ) ಮಾಡಿಕೊಡುತ್ತಾನೆ. ಅದನ್ನು ಹಿಡಿದುಕೊಂಡು ಅದರ ಬೆಳಕಿನಲ್ಲೇ ತಿರುಗಿ ನಡೆದು ಬರೋಣ" ಎಂದು ಎಲ್ಲರನ್ನೂ ಕೇಳಿದೆ. ಮನೆಯಲ್ಲಿ ಎಲ್ಲರೂ ನನ್ನ ಯೋಜನೆಯನ್ನು ಕಿತ್ತುಹಾಕಿ, "ನಿಂಗೆ ಬ್ಯಾರೆ ಕೆಲ್ಸ ಇಲ್ಲೆ, ಸುಮ್ನೆ ಮನ್ಕ್ಯಳಿ" ಎಂದು ಬಯ್ದೇಬಿಟ್ಟರು. ಯಾಕೆಂದರೆ ಅದೊಂದು ವಿಚಿತ್ರವಾದ ಪ್ರಶ್ನೆಯಾಗಿತ್ತು.!!!
ನಮ್ಮೂರಿನ ಬಸ್ಟಾಪಿನಿಂದ 1ಕಿಮಿ ದಟ್ಟವಾದ ಕಪ್ಪು ಕಾಡಿನಲ್ಲಿ ನಡೆದು ಹೋದರೆ ನಮ್ಮ ಮನೆ ಸಿಗುತ್ತದೆ. ಆ ಕಾಡಿನ ಹಾದಿಯಲ್ಲಿ ನಡೆದು ಹೊರಟರೆ ಖಾಯಂ ತಿರುಗುವ ಜನರಿಗೂ ಕೆಲವೊಮ್ಮೆ ಭಯ ಕಾಡುತ್ತದೆ. ಹತ್ತಿರದಲ್ಲೇ ಕೆಲವೊಮ್ಮೆ ಗುರ್-ಗುಡುವ ಹುಲಿ, ಅಕಾಸ್ಮಾತ್ರ್ ಬೆಂಬತ್ತಿ ಓಡಿಸಿಕೊಂಡು ಬರುವ ಕರಡಿಗಳು, ಕಾಡೆಮ್ಮೆಗಳ ಓಡಾಟ ಇತ್ಯಾದಿ. ಸುಮ್ಮನೇ ಒಂದು ಕಾಡುಕೋಳಿ ಚರಪರ ಸದ್ದು ಮಾಡಿದರೂ ಅಂಜಿಕೆ. ದೂರದಲ್ಲಿ ಮೇಯುತ್ತಿರುವ ದನವನ್ನೇ ಹುಲಿ ಎಂದು ಗ್ರಹಿಸಿ ಓಟಕಿತ್ತಿದ್ದು ತುಂಬಾ ಸಲ ಇದೆ. ಮನೆಗೆ ಬಂದು ಮುಟ್ಟುವವರೆಗೂ ಕಂಡೂ ಕಾಣದ ಭಯ ನಮ್ಮ ಹೆಗಲ ಮೇಲಿರುತ್ತದೆ. ಇಂಥಾ ದಾರಿಯಲ್ಲಿ ಅಮಾವಾಸ್ಯೆಯ ರಾತ್ರಿಯಲ್ಲಿ ’ವಾಕ್’ ಹೋಗುವದರ ಬಗ್ಗೆ ಊಹಿಸಿಕೊಳ್ಳಿ.!!!
ಸದಾ ಹುಮ್ಮಸ್ಸಿನಲ್ಲಿರುವ ಕಾರ್ತಿಕ್ ಕೂಡಲೇ ಇದಕ್ಕೆ ಒಪ್ಪಿದ. ರಂಗನನ್ನು ಒಪ್ಪಿಸಲು ಹರಸಾಹಸಪಟ್ಟೆವು. ಆದರೆ ರಂಗ ಹೊರಡುವ ಮೊದಲೇ ಇವರಿಬ್ಬರೂ ತಮ್ಮ ಹುಚ್ಚಾಟಗಳಿಂದ ತನ್ನ ಪ್ರಾಣಕ್ಕೇ ಸಂಚಕಾರ ತರುತ್ತಾರೆ ಎಂದು ಅವಲತ್ತುಕೊಳ್ಳುತ್ತಾ ಹೊರಟ. ಕಾವಾ ಮತ್ತು ಅಜಿತ್ ಸುಖನಿದ್ರೆಗೆ ಜಾರಿದ್ದರು. ಕೈನಲ್ಲಿ ಒಂದು ಕರೆಂಟು ಬ್ಯಾಟ್ರಿ ಹಿಡಿದು ಮೂರೂ ಜನ ಕಡುಕಪ್ಪಿನಲ್ಲಿ ಎಡವುತ್ತಾ ನಡೆದು ಹೊರಟೆವು. ನಾನು ಕಾರ್ತಿಕ್ ಗೆ ಮಳಲಗಾಂವ್ ನ ಪ್ರಾಣಿಗಳ ಕಥೆಗಳನ್ನು ಹೇಳತೊಡಗಿದೆ. ’ನಮ್ಮ ದೂರದ ಸಂಬಂಧಿಕರೊಬ್ಬರನ್ನು ಹುಲಿ ಕೊಂದ ಕಥೆ, ಅಚ್ಚೇಕೇರಿ ಗೋಪಣ್ಣನನ್ನು ಹಂದಿ ಓಡಿಸಿಕೊಂಡು ಬಂದ ಕಥೆ, ಕುಟ್ಟಪ್ಪನ ಸೈಕಲ್ ಅನ್ನು ಕರಡಿ ಓಡಿಸಿಕೊಂಡು ಹೋದ ಕಥೆ...’ ಇತ್ಯಾದಿ. ರಂಗ ಮಾತ್ರ ತನ್ನ ರಂಗಿನಾಟಗಳನ್ನೆಲ್ಲಾ ಬಂದುಮಾಡಿ ಗುಮ್ಮನಂತೆ ನಾನು ಹೇಳುತ್ತಿದ್ದ ಕಥೆಗಳನ್ನೇ ಕೇಳುತ್ತಾ ಒಳಗೊಳಗೇ ಅಳುಕತೊಡಗಿದ.
ಕತ್ತಲಲ್ಲಿ ಕಗ್ಗಾಡಿನಲ್ಲಿ ನಡೆಯುತ್ತಿದ್ದರೆ ಕಿವಿ ಎಷ್ಟೇ ಹಿರಿದು ಮಾಡಿದರೂ ಎನೇನೂ ಕೇಳಿಸದ ನಿಶ್ಯಬ್ಧತೆ, ನಗರದ ಜೀವನದಲ್ಲಿ ಎಂದೆಂದೂ ಕಂಡಿರದ ದಟ್ಟ ಕಾಡಿನ ಕತ್ತಲು, ಕೂಗಿದರೂ ಯಾರೂ ನಮ್ಮ ಸಹಾಯಕ್ಕಿಲ್ಲ ಎಂಬ ಅಸಹಾಯಕತೆ.... ಇವೆಲ್ಲಾ ಭಯವನ್ನು ಮೂರ್ಪಟ್ಟು ಮಾಡಿಬಿಡುತ್ತವೆ. ಆಗ ಎಲ್ಲಾದರೂ ಒಂದೇ ಒಂದು ಸಣ್ಣ ಸದ್ದಾದರೂ ಸಾಕು, ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಅಂಥಾ ಕ್ಷಣಗಳು, ಈ ಭೂಮಿಯ ಮೇಲೆ ನಮಗಂಟಿಕೊಂಡಿರುವ ಜಾತಿ, ಭಾಷೆ, ಡಿಗ್ರಿಗಳು, ಸಂಬಂಧಗಳು, ಬ್ಯಾಂಕಿನಲ್ಲಿರುವ ಹಣ... ಇವೆಲ್ಲವುಗಳನ್ನು ಮರೆಸಿ, ನಾವೂ ಎಲ್ಲಾ ಪ್ರಾಣಿಗಳಂತೆಯೇ ಒಂದು ಪ್ರಾಣಿಯ ವರ್ಗ ಎಂಬುದನ್ನು ನೆನಪಿಸಿಕೊಡುತ್ತವೆ.
ಅವರಿಬ್ಬರೂ ಮೈಸೂರಿನಲ್ಲೇ ಹುಟ್ಟಿ ಬೆಳೆದವರು. ಅದೂ ರಂಗನಿಗೆ ಕಾಡಿನ ಪರಿಚಯ ಕಡಿಮೆ. ಅದರಲ್ಲೂ ಒಮ್ಮೆಲೇ ಅಂಥಾ ಕಾಡಿನಲ್ಲಿ ರಾತ್ರಿ ಓಡಾಟ ರಂಗನಿಗೆ ಸಹಜವಾಗಿ ನಡುಕ ಹುಟ್ಟಿಸಿತು. "ನಾನು ಸಾಯ್ಬೇಕು ಅಂತಿದ್ರೆ ಮೈಸೂರಲ್ಲೇ ಸಾಯುತ್ತಿದ್ದೆ. ಅಂತೂ ನಂಗೆ ಸತೀಶನ ಊರಲ್ಲೇ ಸಾಯ್ಬೇಕು ಅಂತಾ ಹಣೆಬರಹ ಇದೆ ಅನ್ಸತ್ತೆ. ಈ ಕತ್ತಲಲ್ಲಿ ಯಾವುದಾದ್ರು ಪ್ರಾಣಿ ಬಂದು ನನ್ನ ತಿಂದುಬಿಟ್ಟರೆ...ಮಕ್ಳಾ ಜಿಮ್ ಕಾರ್ಬೆಟ್ ಕಥೆ ಎಲ್ಲಾ ಹೇಳ್ಬೇಡ್ರೋ.. ಇಂದು ನನ್ನ ಹುಲಿ ತಿಂದುಬಿಟ್ರೆ ನನ್ ಬಾಡಿನ ಮೈಸೂರ್ ಗೆ ತಗೊಂಡು ಹೋಗ್ರೋ...", ಹೀಗೇ ತನ್ನ ಪ್ರಾಣ ಯಾವ ಯಾವ ರೀತಿ ಹೋಗಬಹುದೆಂದು ಕಲ್ಪಿಸುತ್ತಾ ಗಡಗಡಿಸತೊಡಗಿದ !!... ಗಡಗಡನೆ ನಡುಗುತ್ತಾ, ಬೆವರುತ್ತಿದ್ದ ರಂಗನಿಗೆ ನರಭಕ್ಷಕ ಹುಲಿಗಳ ಕಥೆಗಳನ್ನು ಇನ್ನಷ್ಟು ಹೇಳಿದೆವು. ನಾವು ಬಸ್ಟಾಪಿನ ಹತ್ತಿರದ ಪರ್ಸುವಿನ ಮನೆ ಮುಟ್ಟುವದರಲ್ಲಿ ರಂಗನ ಮಾತೇ ನಿಂತಿತ್ತು.
ಪರ್ಸುವಿನ ಮನೆಯಲ್ಲಿ ಸೈಕಲ್ ಟೈರ್ ನ ಬೆಂಕಿಯ ಪಂಜುಗಳನ್ನ ಮಾಡಿಸಿ, ಅದನ್ನೇ ಭೂತದ ಧಾರಾವಾಹಿಗಳಲ್ಲಿ ತೋರಿಸುವಂತೆ ಹಿಡಿದು ತಿರುಗಿ ಮನೆಯ ಕಡೆ ಹೊರಟರೆ, ರಂಗ "ಎಯ್ ಮಕ್ಳಾ ನಾನಂತೂ ಬರಲ್ಲಾ.. ಈಗ 11 ಗಂಟೆ ರಾತ್ರಿ ಆಯ್ತು.. ನಾನು ಇಲ್ಲೇ ಮಲ್ಕೋತೀನಿ" ಅಂತ ಹಠ ಹಿಡಿದ. ಅಂತೂ ಬೆಂಕಿ ಇರುವದರಿಂದ ಯಾವ ಪ್ರಾಣಿಯೂ ನಮ್ಮ ತಂಟೆಗೆ ಬರುವದಿಲ್ಲ ಎಂದು ಅವನ ಮನವೊಲಿಸಿ ಮನೆಗೆ ತಿರುಗಿ ಬಂದೆವು.
ರಂಗನಿಗೆ ಪ್ರಾಣ ಹೋಗಿ ಮತ್ತೊಮ್ಮೆ ಬಂದಂತಾಯಿತು!!!
ಆವತ್ತಿನ ರಾತ್ರಿಯ ಆ ’ವಾಕ್’ ಅನ್ನು ಕಾರ್ತಿಕ್, ರಂಗ ಹಾಗೂ ನಾನು ಎಂದಿಗೂ ಮರೆಯಲಸಾಧ್ಯ.