Tuesday, July 27, 2010

ಅಚ್ಚೆತಡಿಯ ಕಾಡುನಾಯಿ

ಅಚ್ಚೆತಡಿ (ಗದ್ದೆ ಅಥವಾ ತೋಟದ ಆಚೆಯ ದಡ - ಮಲೆನಾಡಿನ ಆಡುಭಾಷೆ.) ಅಂದರೆ ನಮ್ಮ ಮನೆಯ ಭತ್ತದ ಗದ್ದೆಯ ಕೊನೆಯ ಅಂಚು.ನಮ್ಮೂರಿನ ಕೊನೆಯ ಜಾಗ ಅದು. ಅಲ್ಲಿಂದ ಮುಂದೆ ಬೇಡ್ತಿ ನದಿಯನ್ನು ಆವರಿಸಿರುವ ದಟ್ಟವಾದ ಕಾಡು ಮಾತ್ರ ನಿಮಗೆ ಸಿಗುತ್ತದೆ. ಅಚ್ಚೆತಡಿಯಲ್ಲಿರುವ ಸಣ್ಣ ಹಳ್ಳ ಮಳೆಗಾಲದಲ್ಲಿ ಮಾತ್ರ ಆಚೀಚೆಯ ಗುಡ್ಡಗಳ ನೀರಿನಿಂದ ತುಂಬಿ ಹರಿಯುತ್ತದೆ. ಬೇರೆಯ ಸಮಯದಲ್ಲಿ ಮೇಲಿನ ಕೆರೆಯಿಂದ ಹರಿದುಬರುವ ನೀರು ಮಾತ್ರ ಹಳ್ಳದ ಹೊಂಡಗಳಲ್ಲಿ ತುಂಬಿರುತ್ತದೆ. ಸುತ್ತಲಿನ ಕಾಡುಪ್ರಾಣಿಗಳಿಗೆ ಸಹಜವಾಗಿ ಅದೊಂದು ನೀರು ಕುಡಿಯುವ ಜಾಗ. ನಮ್ಮ ಮನೆಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಆ ಹಳ್ಳದ ಅಂಚಿಗೆ ಗದ್ದೆಯ ತುದಿಯನ್ನು ಆವರಿಸಿ ಅರ್ಧ ಆಳಿನ ಎತ್ತರದ ಕಲ್ಲಿನ ಕಟ್ಟೆ ಕಟ್ಟಿದ್ದರು.

ನನಗೆ ಆಗ ಸುಮಾರು ೫-೬ ವರ್ಷವಿರಬಹುದು. ಬೇಸಿಗೆ ರಜೆಯಲ್ಲಿ ಆದವಾನಿಯಿಂದ ನಮ್ಮ ದೊಡ್ಡಪ್ಪ - ದೊಡ್ಡಮ್ಮನವರ ಜೊತೆ ಅಣ್ಣಂದಿರಾದ ಸುಬ್ಬಣ್ಣ,ತಿರುಮಲಣ್ಣ ಬರುತ್ತಿದ್ದರು. ಮನೆಯಲ್ಲಿರುತ್ತಿದ್ದ ವಿಶ್ವಣ್ಣ ಹಾಗೂ ನಮಗೆ ಅದು ಆಟ-ಓಟಗಳ ಉತ್ತುಂಗದ ಸಮಯ. ಎಲ್ಲ ಮೊಮ್ಮಕ್ಕಳು ಸೇರಿ ಅಸಾಧ್ಯವಾದ ಕೆಲಸಗಳನ್ನು ಮಾಡುವ ಹುಮ್ಮಸ್ಸು. ಅಚ್ಚೆತಡಿಯ ಹಳ್ಳಕ್ಕೆ ಡ್ಯಾಮು ಕಟ್ಟುವದು ವಿಶ್ವಣ್ಣನ ಮಹದಾಸೆಯ ಪ್ರಾಜೆಕ್ಟ್ ಆಗಿತ್ತು. ಸುತ್ತಲಿನ ಕಲ್ಲುಗಳನ್ನು ಸೇರಿಸಿ, ಹಳ್ಳದ ಪಕ್ಕದ ಹಸಿ ಮಣ್ಣನ್ನು ಹಾಕಿ ಸಣ್ಣದೊಂದು ಡ್ಯಾಮು ಮಾಡಲು ಒಂದು ಮಕ್ಕಳ ಗುಂಪೇ ಸೇರುತ್ತಿತ್ತು. ಆದರೆ ಆ ಡ್ಯಾಮು ಕಟ್ಟಿದರೆ ಅದು ಗದ್ದೆಯ ಕಲ್ಲಿನ ಕಟ್ಟೆಯನ್ನು ಸಡಿಲಗೊಳಿಸಿ, ಕಟ್ಟೆ ಒಡೆಯುತ್ತದೆ ಎಂಬುದು ಹಿರಿಯರ ವಾದ. ನಮ್ಮ ಮನೆಯ ಸಣ್ಣ ಅಜ್ಜರು (ಅಜ್ಜರ ತಮ್ಮ) ನಮ್ಮ ಅಣ್ಣಂದಿರ ಮಹದಾಸೆಯ ಈ ಪ್ರಾಜೆಕ್ಟ್ ಗೆ ಭಾರೀ ವಿರೋಧಿಯಾಗಿದ್ದರು :-). ಅದಕ್ಕೇ ಮಧ್ಯಾಹ್ನ ಊಟವಾದ ನಂತರ ಎಲ್ಲ ಹಿರಿಯರೂ ಕವಳ ಹಾಕಿ ಸಣ್ಣ ನಿದ್ರೆಗೆ ಜಾರಿದ ಮೇಲೆ ಮಕ್ಕಳ ಗುಂಪು ಅಚ್ಚೆತಡಿಯತ್ತ ಕಳ್ಳ ಓಟ ಓಡುತ್ತಿತ್ತು.

ಅಂದು ಮಧ್ಯಾಹ್ನ ನಾವೆಲ್ಲ ಅಚ್ಚೆತಡಿಯ ಕಡೆಗೆ ಹೊರಟೆವು. ಹಳ್ಳ ಹತ್ತಿರ ಬರುತ್ತಿದ್ದಂತೆ ಅಲ್ಲಿ ಒಂದು ನಾಯಿ ನೀರು ಕುಡಿಯುತ್ತಿರುದು ಎಲ್ಲರಿಗೂ ಕಂಡಿತು. ಯಾರೋ ಹೇಳಿದರು, "ಹೇ, ಹಳ್ಳದಲ್ಲಿ ನಮ್ಮ ಮನೆ ಕಾಳು (ನಮ್ಮ ಸಾಕು ನಾಯಿ) ನೀರು ಕುಡೀತಾ ಇದ್ದಾ....". ಎಲ್ಲ ಹುಡುಗರ ಗುಂಪು ಹಳ್ಳಕ್ಕೆ ತುಂಬಾ ಹತ್ತಿರ ಹೋಗುತ್ತಲೇ ಇತ್ತು. ಅಷ್ಟರಲ್ಲಿ ಮತ್ಯಾರೋ ಆತಂಕದಿಂದ ಹೇಳಿದರು, "ಅದು ಕಾಳು ಅಲ್ಲಾ, ಕಾಡುಕುನ್ನಿ...!!!!"

ಹೌದು!!!. ಅಂದು ಕಾಡುನಾಯಿಗೆ ಕೆಲವೇ ಅಡಿಗಳ ಅಂತರದಲ್ಲಿ ನಾವೆಲ್ಲ ಮಕ್ಕಳೂ ಇದ್ದೆವು. ಅಲ್ಲಿ ಇನ್ನೂ ಎಷ್ಟು ನಾಯಿಗಳಿದ್ದವು ಎಂಬುದನ್ನು ನೋಡಲು ಯಾರಿಗೂ ವ್ಯವಧಾನವಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಡ್ಯಾಮು ಕಟ್ಟುವ ಮಕ್ಕಳ ಸೇನೆ ಮನೆಯಕಡೆಗೆ ಓಟಕಿತ್ತಿತು. ನಾನು ಬಹಳ ಚಿಕ್ಕವನಾಗಿದ್ದರಿಂದ ಬಹಳ ವೇಗವಾಗಿ ಓಡಲಾಗುತ್ತಿರಲಿಲ್ಲ.ತಿರುಮಲಣ್ಣನಿಗೆ ಅದು ಕೂಡಲೇ ಅರಿವಾಗಿ ಹಿಂದಿನಿಂದ ಅಳುತ್ತಾ ಓಡಿ ಬರುತ್ತಿದ್ದ ನನ್ನನ್ನು ಅವನ ಬೆನ್ನ ಮೇಲೆ ಉಪ್ಪಿನಮೂಟೆ ಮಾಡಿ ಹೊತ್ತುಕೊಂಡು ಓಡಿದ. ಅಂತೂ ಎಲ್ಲರೂ ಕೂದಲೆಳೆಯಲ್ಲಿ ಅಪಾಯದಿಂದ ಬಚಾವಾಗಿದ್ದೆವು.!

ಆವತ್ತಿನ ಓಟ ಇಂದಿಗೂ ಹಾಗೆಯೇ ನೆನಪಿದೆ. ಆವತ್ತು ತಿರುಮಲಣ್ಣ ನನ್ನ ಎತ್ತಿಕೊಂಡು ಓಡದೇ ಇದ್ದಿದ್ದರೆ ಏನಾಗುತ್ತಿತ್ತೋ. ಇಂದಿಗೂ ನೆನೆಸಿದರೆ ಮೈ ಜುಂ ಎನ್ನುತ್ತದೆ. ಹಾಗೂ ತಿರುಮಲಣ್ಣನ ಸಹಾಯ, ಸಮಯಪ್ರಜ್ನೆ ಹಾಗೂ ಧೈರ್ಯಕ್ಕೆ ಏನು ಕೊಟ್ಟರೂ ಕೊಡಬಹುದೆಂದೆನಿಸುತ್ತದೆ.

3 comments:

Mrityunjay said...

Nice article...
E maraya kaad naayi gumpu bandre swalpa dangereya

Unknown said...

Very well written...Enjoyed reading it.

Krishna said...

very nicely written, extremely natural and for someone who's seen the place, i can almost imagine a group of kids running back towards the safety of the house! :-)