Tuesday, December 18, 2007

ಮಲೆನಾಡಿನ ಕಂಪು

ಮಲೆನಾಡಿನ ಮಾನ್ಸೂನ್ ಮಳೆಯ ಅರ್ಭಟದ ಭೀಕರತೆ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು.
ಸುತ್ತಲೂ ಕರಿಯ ಕಗ್ಗತ್ತಲ ಕಾಡು. ಕಪ್ಪಾದ ಮೋಡ ಆಗಸವನ್ನು ಆಕ್ರಮಿಸಿದರೆ ಸೂರ್ಯನನ್ನು ತಿರುಗಿ ಕಾಣಲು ೩ ರಿಂದ ೪ ತಿಂಗಳೇ ಕಾಯಬೇಕು. ಮಳೆಯ ಆರ್ಭಟಕ್ಕೆ ಮೇಲ್ಮಣ್ಣನ್ನೆಲ್ಲಾ ಕೊಚ್ಚಿಕೊಂಡು ಕೆಂಪಾಗಿ ರಭಸದಿಂದ ಹರಿಯುವ ಸಣ್ಣಪುಟ್ಟ ತೊರೆಗಳು. ಅಲ್ಲಲ್ಲಿ ಮತ್ತಿಮರ,ಕೌಲುಮರಗಳ ಮೇಲೆ ಬೆಳೆಯುತ್ತಿರುವ ಮರಕೆಸು. ಮಳೆಗಾಲದ್ದೇ ಆದ ಹೂಗಳಿಂದ ತುಂಬಿರುವ ಎಲ್ಲರ ಮನೆಯ ಹೂದೋಟಗಳು...
ಸರಿಯಾದ ಕಾಲುವೆಗಳಿಲ್ಲದೇ ರಸ್ತೆಯಲ್ಲಿಯೇ ನೀರು ಹರಿಹರಿದು ಕೊರಕಲು-ಮುರುಕಲು ರಸ್ತೆಗಳು.ರಸ್ತೆಯ ಮಣ್ಣು ನೀರಿಂದ ಬರುವ ಜಂಗನ್ನು ತಡೆಯಲು ಎಲ್ಲರ ವಾಹನಗಳ ಚಕ್ರಕ್ಕೆ ಬಡಿದ ಹಳದಿ ಪೇಂಟು. ಇನ್ನು ಕೆಲಸದವರಂತೂ ಕಂಬಳಿಯ ಕೊಪ್ಪೆಯನ್ನು ಮಾಡಿಕೊಂಡು ಅದನ್ನು ಬೆನ್ನಿಗೆ ಹೊದ್ದು ಗದ್ದೆಯ ಕೆಲಸಕ್ಕೆ ಹೊರಡುತ್ತಾರೆ.
ತೋಟಗಳಲ್ಲಿ ಮಳೆಗಾಲದಲ್ಲಿ ಮಾತ್ರ ಬದುಕುವ ಉಂಬಳಗಳ ಕಾಟ. ಮನೆಯ ಅಂಗಳವಂತೂ ಕುರ್ಲಿ, ಚ್ವಾರಟೆ ಹುಳ, ನಂಜುಳೆ (ಎರೆಹುಳು) ಗಳ ಸಾಮ್ರಾಜ್ಯ.. ಪರ್ಸು ಮತ್ತು ಅವನ ಕಡೆಯವರು ಕುರ್ಲಿಯ ಚಟ್ನಿ ಮತ್ತು ಸಾರು ಬಹಳ ರುಚಿ ಇರುತ್ತದೆ ಎಂದು ಹೇಳುತ್ತಾರೆ..!!!
ಗದ್ದೆಯನ್ನು ಉಳಲು ವರ್ಷದಂತೆ ಜೋರು ತಯಾರಿ. ಹಾಳಾಗಿರುವ ಟ್ರ್ಯಾಕ್ಟರ್ ನ ರಿಪೇರಿ, ಉತ್ತ ಗದ್ದೆಯ ನೆಲವನ್ನು ಸಮಾನಾಂತರ ಮಾಡಲು ಬಳಸುವ ಎತ್ತುಗಳಿಗೆ ಭರ್ಜರಿ ಊಟ. ಭತ್ತವನ್ನು ಬಿತ್ತಲು ಬಳಸುವ ಒಳ್ಳೇ ಜಾತಿಯ ಭತ್ತದ ಬೀಜದ ಹುಡುಕಾಟ.

more to follow in coming days....

2 comments:

Pramod said...

ತು೦ಬಾ ಚೆನ್ನಾಗಿ ಬರೆದಿದ್ದೀರ ..ಹೀಗೇ ಬರಿಯುತ್ತಾ ಇರಿ :)

Sushrutha Dodderi said...

ಪ್ರಿಯರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ