Thursday, May 21, 2009

ದಿಕ್ಕಿಲ್ಲದ ಓಟ


ಆತ ಅಂದು ತನ್ನ ಅಜ್ಜನ ಬಳಿಗೆ ಒಡೋಡಿ ಬಂದ.
ಮಗುವಿನ ತವಕ, ಉದ್ವೇಗ, ಆವೇಶ, ದು:ಖ ಎಲ್ಲವನ್ನೂ ಗಮನಿಸಿದ ಆ ಹಿರಿಯ ಜೀವ ಕೇಳಿತು.
"ಮಗೂ, ನೀನು ದಣಿದಾಗ ನೀರು ಬೇಕೆಂದು ಹಣಹಣಿಸುತ್ತೀಯಲ್ಲವೇ...?".
"ಹೌದು, ಖಂಡಿತವಾಗಿಯೂ." ಆತ ಹೇಳಿದ.
"ಆದರೆ ಗಂಟಲುಪೂರ್ತಿ ನೀರು ಕುಡಿದಾದಮೇಲೆ...?"
ಆತ ಕರಗಿದ ಆವೇಶದಿಂದ ಮರುಮಾತನಾಡದೆ ಬಂದಂತೆಯೇ ಹಿಂತಿರುಗಿದ.

Wednesday, February 11, 2009

ಯಾಕೆ ಮೂಕನಾದೆ?

ಅಂದು ಮುಂಜಾನೆಯ ಗಡಗಡಿಸುವ ಛಳಿಯಲ್ಲಿ ಚಹಾ ಅಂಗಡಿಯತ್ತ ನಡೆದಿದ್ದೆ. ಅಂದ್ಯಾಕೋ ಮನಸ್ಸು ಗರಬಡಿದಂತೆ ಸ್ಥಬ್ಧವಾಗಿತ್ತು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಂದು ಅಂಗಡಿಯಿಂದ "ಯಾಕೆ ಮೂಕನಾದೋ.... ಗುರುವೆ ನೀನು ಯಾಕೆ ಮೂಕನಾದೋ...? " ಎಂಬ ಭೀಮಸೇನ ಜೋಷಿಯವರು ಹಾಡಿರುವ ಭಕ್ತಿಗೀತೆ ಮೂಡತೊಡಗಿತ್ತು.

ಸ್ವರಸಾಮ್ರಾಟ ಭಾರತರತ್ನ ಪಂಡಿತ್ ಭೀಮಸೇನ ಜೊಷಿಯವರ ಗಾಯನ ಎಂಥವರನ್ನೂ ಮಂತ್ರಮುಗ್ಧಗೊಳಿಸಬಲ್ಲಂತಾದ್ದು. ಒಮ್ಮೆ ಅವರ ಗಾಯನ ಕಿವಿಗೆ ಬಿದ್ದರೆ ಸಾಕು, ಅದು ಎಷ್ಟೋ ಹೊತ್ತಿನವರೆಗೆ ನಮ್ಮ ಕಿವಿಯಲ್ಲಿ ರಣರಣಿಸುತ್ತಿರುತ್ತದೆ, ಅದು ಎಷ್ಟೋ ಹೊತ್ತಿನವರೆಗೆ ನಮ್ಮ ನಾಲಿಗೆ ಅದನ್ನೇ ಗುನುಗುನಿಸುತ್ತಿರುತ್ತದೆ.

"ನಾಥನು ನೀನು.. ಅನಾಥನು ನಾನು .." ಎಂದು ಹೀಗೆ ಮುಂದುವರಿಯುತ್ತಾ ಆ ಗೀತೆ ನನ್ನನ್ನು ಭಕ್ತಿಸಾಗರದಲ್ಲಿ ಮುಳುಗಿಸಿಬಿಟ್ಟಿತು. ಹಾಗೇ ಗಾಯನ ಮುಗಿಯುವ ವರೆಗೂ ಅಲ್ಲೇ ನಿಂತು, ನಂತರ ಆ ಅಂಗಡಿಯವನಿಗೆ ಅಭಿನಂದಿಸಿ "ಯಾಕೆ ಮೂಕನಾದೋ ... " ಎಂದು ಹಾಡುತ್ತಾ ಮುನ್ನಡೆದೆ.

Saturday, December 27, 2008

ದೀಪವೂ ನಿನ್ನದೇ... ಗಾಳಿಯೂ ನಿನ್ನದೇ..

Bhuvanagiri Temple

ಸ್ಥಳ: ಭುವನಗಿರಿ ದೇವಸ್ಥಾನ. ಸಿದ್ದಾಪುರ.ಉತ್ತರ ಕನ್ನಡ.

ದಿಗಂತದಲ್ಲಿ ನೆಟ್ಟ ನೋಟ

ಸ್ಥಳ : ಹೆಜೆನಿ ಗುಡ್ಡ. ಸಿದ್ದಾಪುರ ತಾಲೂಕು, ಜೋಗದ ರಸ್ತೆ.

Monday, December 8, 2008

ದಬ್ಬೆ ಜಲಪಾತ

ದಬ್ಬೆ ಜಲಪಾತ / ಕೆಪ್ ಜೋಗ :

ಬೆಂಗಳೂರಿನಲ್ಲಿ ದಿನವಿಡೀ ಕಂಪ್ಯೂಟರನ್ನು ಎವೆಯಿಕ್ಕದೇ ನೋಡುತ್ತಿರುವ ಕಣ್ಣುಗಳಿಗೆ, ದಿನವಿಡೀ ವಾಹನಗಳು ಕಾರುವ ಹೊಗೆಯನ್ನು ಕುಡಿಯುವ ಶ್ವಾಸನಾಳಗಳಿಗೆ, ವರ್ಷವಿಡೀ ಕಿವಿ ಹರಿದುಹೋಗುವಷ್ಟು ಶಬ್ದಾಘಾತಗಳಿಂದ ತತ್ತರಿಸಿಹೋಗುವ ಕಿವಿಗಳಿಗೆ ಏನಾದರೂ ಸಾಂತ್ವನವನ್ನೀಯುವ ಬಗೆ ಬೇಕೇ ಬೇಕಿತ್ತು.

ಕೃಷ್ಣ, ಪ್ರವೀಣ ನಾರಾ, ಮಿಥುನ್ ಯು, ಪ್ರದೀಪ ಕೊಪ್ಪಾ, ಪ್ರಮೋದ nc, ಪವನ್ ಶಾಸ್ತ್ರಿ ಎಲ್ಲಾ ಕೂಡಿಕೊಂಡು ದಬ್ಬೆ ಜಲಪಾತದೆಡೆಗೆ ಹೊರಟೆವು. ಈ ಮೊದಲೇ ಇಲ್ಲಿಗೆ ಚಾರಣಿಸಿದ್ದ ಶ್ರೀಕಾಂತ್ ಅವರ ಮಾರ್ಗದರ್ಶನ ಇದ್ದಿದ್ದರಿಂದ ನಮ್ಮ ಪ್ರಯಾಣದ ಎಲ್ಲಾ ಪೂರ್ವಯೋಜನೆಗಳು ಸುಲಲಿತವಾದವು. ’ನಕ್ಸಲರ ಕಾಟ’ ಎಂಬ ಭಯ ಎಲ್ಲ ಕಡೆ ಆವರಿಸಿರುವದರಿಂದ,”ಶಿವಮೊಗ್ಗದ ಕಡೆ ಕಾಡು ತಿರುಗಲು ಹೊರಟಿದ್ದೇವೆ”, ಎಂದ ಕೂಡಲೇ ನನ್ನ ಅಮ್ಮ ನನಗೊಮ್ಮೆ ಎಚ್ಚರಿಕೆಯ ಸುರಿಮಳೆಗೈದಳು. ’ಪೇಟೆಯಲ್ಲಿ ಭಯೋತ್ಪಾದಕರ ಕಾಟ, ಕಾಡಿನಲ್ಲಿ ನಕ್ಸಲರ ಕಾಟ. ಎಲ್ಲಿ ಹೋದರೂ ಇದ್ದರೂ ತೊಂದರೆ ತಪ್ಪಿದ್ದಲ್ಲ’, ಎಂದು ಹೇಳಿ ನಾನೂ ಕೈ ತೊಳೆದುಕೊಂಡೆ:-)




ರಾತ್ರಿಯ ಶಿವಮೊಗ್ಗೆಯ ರೈಲು ಬಳಸಿ, ಸಾಗರದಲ್ಲಿ ತಿಂಡಿ ತಿಂದು, ಕಾರ್ಗಲ್(ಸಾಗರದಿಂದ ಜೋಗದ ರಸ್ತೆ, 20km) ಎಂಬ ಊರಿಗೆ ಬಸ್ಸಿನಲ್ಲಿ ಬಂದೆವು. ಇಲ್ಲಿಂದ ಭಟ್ಕಳ ರಸ್ತೆಯಲ್ಲಿ ಹೊಸಗದ್ದೆ (ಕಾರ್ಗಲ್ ನಿಂದ 20km, ಭಟ್ಕಳದ ಕಡೆಗೆ) ಎಂಬ ಊರಿನಲ್ಲಿ ಇಳಿದುಕೊಂಡು ಸುಮಾರು ಆರು ಕಿಮಿ ಇರುವ ದಬ್ಬೆಯ ಜೋಗದ ಕಡೆ ನಡೆದೆವು.

ದಾರಿಯುದ್ದಕ್ಕೂ ಸಿಕ್ಕುತ್ತಿದ್ದ ಹರಣಿ ನೀರಿನಲ್ಲಿ ಆಟವಾಡುತ್ತಾ, ಕಿರು ಜಲಪಾತಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುತ್ತಾ ಮುಂದೆ ಸಾಗುತ್ತಿದ್ದೆವು. ಆದರೆ ದಾರಿಯುದ್ದಕ್ಕೂ ಇದ್ದ ಅನೇಕ ತಿರುವುಗಳು ನಮ್ಮನ್ನು ಬಹಳ ಸುಲಭವಾಗಿ ದಾರಿತಪ್ಪಿಸುವಂತಿದ್ದವು. ದಬ್ಬೆ ಜಲಪಾತದಷ್ಟೇ ಹೆಸರು ಮಾಡಿದವರೆಂದರೆ ದಬ್ಬೆಮನೆಯ ಮಂಜುನಾಥ ಗೌಡರು. ಇವರ ಮನೆಯ ಎದುರಿನ ಗದ್ದೆಯಂಚಿನಲ್ಲೇ ಕೆಳಗಡೆ ಜಲಪಾತವಿರುವದರಿಂದ, ಬಂದ ಚಾರಣಿಗರಿಗೆ ಊಟ, ವಸತಿ ಇತ್ಯಾದಿ ಇವರ ಮನೆಯಲ್ಲೇ ನೆರವೇರುತ್ತದೆ. ಆದ್ದರಿಂದ ದಾರಿಯುದ್ದಕ್ಕೂ ಕಂಡಕಂಡವರಲ್ಲೆಲ್ಲಾ "ಹೊಯ್... ಮಾರಯ್ರೆ...ಗೌಡ್ರ ಮನೆಗೆ ದಾರಿ ಹೆಂಗೆ...?" ಎಂದು ವಿಚಾರಿಸುತ್ತಿದ್ದೆವು.

ಅಂತೂ ಗೌಡರ ಮನೆಗೆ ಬರುವಷ್ಟರಲ್ಲೇ ಮಧ್ಯಾಹ್ನವಾಗಿತ್ತು. ’ಕೊನೆಯಲ್ಲಿ ಬೇಕಾಗಬಹುದು’ ಎಂದು ಗೌಡರು ಕೊಟ್ಟ ಹಗ್ಗವನ್ನು ಹೆಗಲಿಗೆ ಏರಿಸಿ ಭತ್ತದ ಗೆದ್ದೆಯ ತುದಿಯಿಂದ ಕೆಳಗೆ ಇಳಿಯಲು ಶುರು ಮಾಡಿದೆವು. ಸುಮಾರು ಅರ್ಧ ಕಿಮಿಯಷ್ಟು ಲಂಬವಾಗಿ ಗದ್ದೆಯ ನೆತ್ತಿಯಿಂದ ಇಳಿಯಬೇಕು. ಕೇವಲ ಮರಗಳ ಹಾಗೂ ಬಳ್ಳಿಗಳ ಕಾಂಡದ ಸಹಾಯದಿಂದ ಕೆಳಗೆ ಸಾವಧಾನವಾಗಿ ಇಳಿಯುತ್ತಿದ್ದ ಅನುಭವವಂತೂ ’ಸಖತ್’. ಕೆಲವೊಮ್ಮೆ ನೀವು ಕೈಯಲ್ಲಿ ಹಿಡಿದಿರುವದು ಬಳ್ಳಿಯೋ ಅಥವಾ ಹಾವೋ ಎಂದು ಗೊಂದಲವಾಗುತ್ತಿತ್ತು.!!! ದಾರಿಯುದ್ದಕ್ಕೂ ಹಾವಿನ ಹಾಗೂ ಯಾವಾಗ ಬೇಕಾದರೂ ಆಕ್ರಮಣ ಮಾಡಬಲ್ಲಂತಹ ಕರಡಿಯ ಅಸ್ತಿತ್ವದ ಬಗ್ಗೆ ಒಂದು ಲಕ್ಷ್ಯವನ್ನಿಟ್ಟುಕೊಂಡೇ ಕೆಳಗೆ ಇಳಿದೆವು.



ದಬ್ಬೆಯ ವೈಶಿಷ್ಟ್ಯವೆಂದರೆ ಕೆಳವರೆಗೆ ನೀವು ಇಳಿಯುವವರೆಗೂ ಜಲಪಾತ ಗೋಚರಿಸುವದಿಲ್ಲ. ಆದರೆ ಸುಮಾರು 20-30 ಅಡಿಗಳಷ್ಟು ಎತ್ತರ ಬಾಕಿ ಇರುವಾಗ ಇದು ಹಠಾತ್ತಾಗಿ ಗೋಚರಿಸುತ್ತದೆ. ಆ ದೃಶ್ಯದ ವೈಭವವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಪ್ರದೀಪ ಹೇಳುವಂತೆ, ’’God levellu magaa... God levallu..."!!!.




ಎಲ್ಲರೂ ಉತ್ಸಾಹಭರಿತರಾಗಿ ನೀರಿನಲ್ಲಿ ಆಟ-ಸ್ನಾನಗಳನ್ನು ಮುಗಿಸಿ ಸ್ವಲ್ಪ ಸಮಯ ಪೃಕೃತಿಯ ಸವಿಯನ್ನು ಸವಿಯುತ್ತಾ ಅಲ್ಲೇ ಕಳೆದೆವು.
ದಬ್ಬೆ ಜೋಗದ ಹತ್ತಿರದ ನೋಟ.
ಗಾಳಿಯ ರಭಸಕ್ಕೆ
ನೀರು ಸಿಡಿಯುವದರಿಂದ
ಹತ್ತಿರದವರೆಗೆ
ಕ್ಯಾಮೆರಾ
ತರಲಾಗುವದಿಲ್ಲ.







ಮತ್ತೆ ತಿರುಗಿ ಬೆಟ್ಟವನ್ನು ಹತ್ತಿ ಬರುವಷ್ಟರಲ್ಲಿ ಎಲ್ಲರ ಹೊಟ್ಟೆ ನಿರ್ವಾತವಾಗಿದ್ದರೂ, ಮನಸ್ಸು ಮಾತ್ರ ಗೌಡರ ಮನೆಯಲ್ಲಿ ಆಗಲೇ ತಯಾರಾಗಿದ್ದ ಬಿಸಿಬಿಸಿ ಅನ್ನ-ಸಾರು, ಮಜ್ಜಿಗೆ, ಕಡಿ ಉಪ್ಪು, ಮಿಡಿ ಉಪ್ಪಿನಕಾಯಿ ಇವನ್ನೆಲ್ಲಾ ಮೇಯುವ ಆಸೆಯಿಂದ ಉಲ್ಲಸಿತವಾಗಿತ್ತು.


ಗೌಡರ ಮನೆಯ ಗದ್ದೆಯಲ್ಲಿ ಕ್ಲಿಕ್ಕಿಸಿದ ಭತ್ತದ ತೆನೆ >>










<< ಗೌಡರ ಮನೆಯ ಹಸಿ ಅಡಿಕೆ.


ಒಟ್ಟಿನಲ್ಲಿ ದಬ್ಬೆಜೋಗ ಒಂದು ದಿನದ ಚಾರಣಕ್ಕೆ ಅತಿಸೂಕ್ತವಾದ ಜಾಗ. ಬೇಕಷ್ಟು ನಡಿಗೆ, ಕಾಡು, ಇಳಿಯುವದು, ಹತ್ತುವದು, ಕೆಲವೊಂದು ಕಡೆ ಸವಾಲುಹಾಕುವಷ್ಟು. ಒಟ್ಟಿನಲ್ಲಿ ನಮಗಿರುವ ಪೃಕೃತಿಯ ಜೊತೆಗಿನ ಒಡನಾಟದ ಬಯಕೆ ಕೊಂಚವಾದರೂ ಈಡೇರುವದರಲ್ಲಿ ಸಂಶಯವಿಲ್ಲ.


ಹಾಗೆಯೇ ನಮ್ಮ ಮುಂದಿನ ಹವಣಿಕೆಯ ಪ್ರಕಾರ ಮತ್ತೆ ಸಾಗರದತ್ತ ಪ್ರಯಾಣಿಸಲು, ವ್ಯಾನೊಂದನ್ನು ಬಾಡಿಗೆಗೆ ಪಡೆಯಲು ಪಕ್ಕದ ಊರಾದ ಕೊಡ್ಲಕೆರೆಯ ಇನ್ನೊಂದು ಗೌಡರ ಮನೆಯತ್ತ ಬೆಳದಿಂಗಳಿನಲ್ಲಿ ನಡೆದೆವು.

ದಬ್ಬೆ ಜೋಗಕ್ಕೆ ನೀವೂ ಹೋಗಿಬನ್ನಿ. ಆನಂದಿಸಿ.

Monday, November 24, 2008

ಹುಲಿಯ ಸಾನ್ನಿಧ್ಯ :: ಭಯದ ಓಟ !!!

ಸುಮಾರು ಹತ್ತು ವರುಷಗಳ ಹಿಂದಿನ ವೃತ್ತಾಂತ. ಅಂದು ಮುಗೀಬಾಯಿಯ ಯಂಕಣ್ಣ ಮತ್ತು ನಾನು ಇಬ್ಬರೇ ನಮ್ಮೂರಿನ ದೇವಸ್ಥಾನವಾದ ಚಂದಗುಳಿಯಿಂದ ನಮ್ಮ ಮನೆಗೆ ಹೊರಟಿದ್ದೆವು. ದೇವಸ್ಥಾನದಲ್ಲಿ ಮಧ್ಯಾಹ್ನದ ಪೂಜೆ ಮುಗಿಸಿ ಒಂದು ಕವಳ ಮೆದ್ದು, ಹಾಗೆಯೇ ಒಂದು ಸಣ್ಣ ನಿದ್ರೆ ತೆಗೆಯುವದರಲ್ಲಿ ಸಂಜೆ ಐದು ಆಗಿಹೋಗಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ.

ಅಲ್ಲಿಂದ ನಮ್ಮ ಮನೆ ಸುಮಾರು ನಾಲಕ್ಕು ಕಿಮಿ ಆಗಬಹುದು. ದಟ್ಟ ಕಾಡಿನ ಕಾಲುಹಾದಿ. ಕಾಲುಹಾದಿ ಅಂದರೆ ದಾರಿಯ ಎರಡೂ ಕಡೆ ಮುತ್ತಿಕೊಂಡಿದ್ದ ಅಡವಿ. ಸುಮಾರು ಒಂದು ಹತ್ತು ಹೆಜ್ಜೆ ಮುಂದೆ ಹಾಗೂ ಹಿಂದೆ ಮಾತ್ರ ದಾರಿ ಗೋಚರಿಸುತ್ತಿತ್ತು.
ನಮ್ಮ ಯಾವಾಗಿನ ರೂಢಿಯಂತೆ ಏನೇನೋ ಸುದ್ದಿಗಳನ್ನು ಹರಟುತ್ತಾ ನಡೆದಿದ್ದೆವು.

ಛಳಿಗಾಲವಾಗಿದ್ದರಿಂದ ಬೇಗನೇ ಕತ್ತಲು ಆವರಿಸತೊಡಗಿತ್ತು. ಸುಮಾರು ಒಂದು ಕಿಮಿ ನಡೆದಿರಬಹುದು, ಚಂದಗುಳಿ ಹಳ್ಳವನ್ನೂ ದಾಟಿಯಾಗಿತ್ತು. ಒಮ್ಮೇಲೇ ಮಂಗಗಳು ಕಿರುಚಾಡತೊಡಗಿದವು. ಅವುಗಳ ವಿಚಿತ್ರವಾದ ಕಿರುಚಾಟ, ಮರದಿಂದ ಮರಕ್ಕೆ ಭಯದಿಂದ ಹಾರುವ ರೀತಿ... ಇವುಗಳು ಸಾಮಾನ್ಯವಾಗಿ ದಟ್ಟಡವಿಗಳಲ್ಲಿ ತಿರುಗಾಡುವವರಿಗೆ ಭಾರೀ ಅಪಾಯದ ಮುನ್ಸೂಚನೆಯೇ ಸರಿ.

ಯಂಕಣ್ಣ ಕೂಡಲೇ ಹೇಳಿದ, "ಅಲ್ಲಿ ನೋಡು ಹುಲಿ ಹೆಜ್ಜೆ ಕಾಣ್ತಾ ಇದ್ದು"!!! ಆತ ಅಷ್ಟು ಹೆದರಿದ್ದನ್ನು ನಾನೆಂದೂ ನೋಡಿರಲಿಲ್ಲ.
ನಾವಿಬ್ಬರೂ ಭಯದಿಂದ ತತ್ತರಿಸಿಹೋಗಿದ್ದೆವು. ಹತ್ತಿರದಲ್ಲಿ ಜಗ್ಗೆಯ ಒಳಗೆ ಆಗುತ್ತಿರುವ ’ಚರಪರ’ ಸದ್ದು ಹುಲಿಯ ಇರುವಿಕೆಯನ್ನು ಖಚಿತಗೊಳಿಸಿತು. ಸುತ್ತಲೂ ಏನು ನಡೆಯುತ್ತಾ ಇದೆ ಎಂಬುದು ಒಮ್ಮೇಲೇ ಅರಿವಿಗೆ ಬಂದು ಜೀವ ಭಯ ಆವರಿಸಿಕೊಂಡಿತು.

"ಏ ಓಡೋ......." ....ಇಂದಿನವರೆಗೂ ಯಂಕಣ್ಣ ಕಿರುಚಿದ್ದು ಕಿವಿಯಲ್ಲಿ ರಣರಣಿಸುತ್ತಿದೆ.!!! ಅಂದು ಹೇಗೆ ಓಡಿದೆವೆಂದು ಗೊತ್ತಿಲ್ಲ. ಕೊರಕಲು ದಾರಿ, ಮಣ್ಕುಳಿಯ ಘಟ್ಟದ ಇಳಿಜಾರು, ಏನನ್ನೂ ಲೆಕ್ಕಿಸದೆ ಓಡಿದೆವು.

ಅಂದು ಹುಲಿ ನಮ್ಮ ಮೇಲೆ ಧಾಳಿ ಮಾಡುವ ಮನಸ್ಸುಮಾಡಿದ್ದರೆ ನಮ್ಮಿಬರ ಗತಿ ಏನಾಗುತ್ತಿತ್ತೋ....

ನೆನೆಸಿಕೊಂಡರೆ ಇಂದಿಗೂ ಮೈ ಒಮ್ಮೆ ಗಡಗಡ ನಡುಗುತ್ತದೆ.

Thursday, September 18, 2008

ಮಣ್ಕುಳಿ


ಮಣ್ಕುಳಿ. ಅಂದರೆ ಮಣ್ಣಿನ ಕುಳಿ ಅಥವಾ ಮಣ್ಣಿನ ಹೊಂಡ.
ನಮ್ಮೂರಾದ ಮಾಳಲಗಾಂವಿನ ಮೂಲೆಯಲ್ಲಿರುವ ಜಾಗ. ಇಲ್ಲಿರುವದು ಕೇವಲ ಮೂರು ಮನೆಗಳು ಮಾತ್ರ. ಎಲ್ಲಿ ನೋಡಿದರೂ ಮುಗಿಲೆತ್ತರದ ಮರಗಳು ತುಂಬಿರುವ ನಮ್ಮೂರಲ್ಲಿ, ಮಣ್ಕುಳಿಯ ಬೆಟ್ಟ ಅಂದರೆ ಚಾಮುಂಡಿ ಬೆಟ್ಟದಿಂದ ಮೈಸೂರನ್ನು ನೋಡುವ ವೀವ್ ಪಾಯಿಂಟ್ ಇದ್ದಂತೆ...:-) ಮಧ್ಯದಲ್ಲಿ ಹಚ್ಚಹಸಿರಿನ ಭತ್ತದ ಗದ್ದೆಗಳು ತುಂಬಿರುವ ಉದ್ದನೆಯ ಕಣಿವೆ, ಆಚೀಚೆ ಹಸಿರನೆಯ ಬೆಟ್ಟ. ದೂರದಲ್ಲಿ ಕಾಣುವ ಪರಮಣ್ಣನ ಹಾಗೂ ಕ್ರಷ್ಣಪ್ಪನ ಮನೆಯ ಹಂಚುಗಳು. ನಮ್ಮಜ್ಜ ಹೇಳುವ ಹಾಗೆ ಒಂದು ಕಾಲದಲ್ಲಿ ಈ ಮಣ್ಕುಳಿ ಸಂಪೂರ್ಣವಾಗಿ ಅಡವಿಯಿಂದ ತುಂಬಿತ್ತಂತೆ. ಆಗ ಕ್ರಷ್ಣಪ್ಪ ಇನ್ನೊಂದು ಊರಿನಿಂದ ಇಲ್ಲಿಗೆ ಬಂದು ಕಾಡು~ಬೆಟ್ಟ ಸವರಿ ತೋಟ~ಗದ್ದೆ ಮಾಡಿದನಂತೆ. ನಮ್ಮೂರಿನ ಎಲ್ಲರ ಅಭಿಪ್ರಾಯದಂತೆ ಈ ಮಣ್ಕುಳಿಯಲ್ಲಿ ಒಲೆ ಹೊತ್ತಿಸಿದ ಈ ಕ್ರಷ್ಣಪ್ಪ ಬಹಳ ಶ್ರಮಜೀವಿ. ಆತನಿಗೆ ಈಗ ಸುಮಾರು ಎಂಭತ್ತರ ಹರೆಯ. ಒಂದು ದಿನ ಅಲ್ಲೇ ಹತ್ತಿರವಿದ್ದ ಜೇನು ಮರದ ಕೆಳಗೆ ಬೆಂಕಿ ಹಾಕಿ, ಆಗ ಸಿಟ್ಟಿಗೆದ್ದ ನೊಣಗಳಿಂದ ಐವತ್ತು ಅರವತ್ತು ಕಡಿತಗಳನ್ನು ತಿಂದರೂ ಏನೂ ಆಗದವರಂತೆ ಸುಖವಾಗಿದ್ದ ಈ ಕ್ರಷ್ಣಪ್ಪನಿಗೆ ನಾನಂತೂ ಸಲಾಮು ಹೊಡೆಯುತ್ತೇನೆ....

ಈ ಮಣ್ಕುಳಿಯಲ್ಲಿ ಒಂದು ಜಲಪಾತವಿದೆ. ಅದರ ಹೆಸರು ’ನಾಗುಂದ ಹಳ್ಳ’.

ಮೊನ್ನೆ ಊರಿಗೆ ಹೋದಾಗ ನಾನು ಮತ್ತು ಶಿರ್ಯಪಚ್ಚಿ ಅಲ್ಲಿಗೆ ಹೋಗಿದ್ದೆವು. ಪರಮಣ್ಣನ ಮನೆಗೆ ಹೋಗಿ, ಇತ್ತೀಚೆಗೆ ಮದುವೆಯಾದ ಶ್ರೀಕಾಂತನನ್ನು ಮಾತನಾಡಿಸಿ, ಉಂಬಳದ ಕಡಿತವನ್ನು ಸಹಿಸಿ, ಹಳ್ಳದ ಮಳೆಗಾಲದ ಭೋರ್ಗರೆತವನ್ನು ನೋಡಿಬಂದೆವು. ಪರಮಣ್ಣ ಅವನ ಮನೆಗೆ ಇದೇ ಹಳ್ಳದಿಂದ ಹಣಿನೀರಿನ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾನೆ.

ನಾಗುಂದ ಹಳ್ಳ... ಎದುರಿನಿಂದ ಇದನ್ನು ನೋಡಲಸಾಧ್ಯ.
ಪಕ್ಕದಲ್ಲಿ ಇರುವ ಕಿರಿದಾದ ಕಾಲುವೆಯಲ್ಲಿ ನಿಂತು ಮಾತ್ರ ನೋಡಬಹುದು..
ಈ ಹಳ್ಳದಲ್ಲಿ ಬರುವ ನೀರಿನ ಹೊಡೆತಕ್ಕೆ ಒಂದು "Turbine" ಕೂರಿಸಿದರೆ ಆರಾಮಾಗಿ 10 ಮೆಗಾವ್ಯಾಟ್ ಕರೆಂಟು ಪಡೆಯಬಹುದು ಹಾಗೂ KEBಯವರ ಕಾಲು ಹಿಡಿಯುವದನ್ನು ತಪ್ಪಿಸಿಕೊಳ್ಳಬಹುದು ಎಂಬುದು ನಮ್ಮನೆಯ ವಿಶ್ವಣ್ಣನ ಅನೇಕ ವರ್ಷಗಳ ವಾದ.
ಪರಮಣ್ಣ ಮತ್ತು ಶಿರ್ಯಪಚ್ಚಿ.....



ಈ ಘಟ್ಟದ ಕೆಳಗಿರುವ ಮಣ್ಕುಳಿ ನೋಡಲು ಕಣ್ಣಿಗೆ ಸ್ವರ್ಗದಂತೆ ಭಾಸವಾದರೂ, ನಿಜಕ್ಕೂ ಅಲ್ಲಿನ ಬದುಕು ಕಷ್ಟಕರ. ಘಟ್ಟಗಳನ್ನು ಹತ್ತಿ ಇಳಿದು ಅಲ್ಲಿ ಹೋಗಿ ತಲುಪುವದೇ ಒಂದು ದೊಡ್ಡ ಸಾಹಸ.ಮೊನ್ನೆ ಪರಮಣ್ಣನ ಹೊಸ ಆಕಳೊಂದನ್ನು ಹುಲಿ ಹೊತ್ತೊಯ್ದಿದೆಯಂತೆ!!! ಹತ್ತಿರದಲ್ಲೇ ಹುಲಿ ಮತ್ತು ಕಪ್ಪುಚಿರತೆಗಳು ತಮ್ಮ ಇರುವನ್ನು ಸೂಚಿಸುತ್ತಾ ಗಸ್ತು ತಿರುಗುತ್ತಿರುವಾಗ, ಮನೆಯಲ್ಲಿ ಒಳಗಡೇ ಕುಳಿತಿರಲೂ ಭಯವೇ.

ಇದೇ ಮಣ್ಕುಳಿಯ ಘಟ್ಟದ ಮೂಲಕವಾಗಿ ಮೊದಲ ಸಲ ನಮ್ಮೂರಿಗೆ ಕರೆಂಟು ತರುವ ಹುಮ್ಮಸ್ಸಿನಲ್ಲಿ, ಮಣ್ಕುಳಿಯ ಕಾನನದಲ್ಲಿ ಕರೆಂಟು ಕಂಬಗಳನ್ನು ಎಳೆದು ತಂದು ನಿಲ್ಲಿಸಿ ತಂತಿ ಜೋಡಿಸಿದ ನಮ್ಮೂರಿನ ಎಲ್ಲರ ಶ್ರಮವೂ ನೆನಪಿಸಿಕೊಳ್ಳಬೇಕಾದ್ದೇ. KEB ಯವರು ತಲೆಹಾಕಿಯೂ ಮಲಗದಂಥಾ ದಿಕ್ಕಿನಲ್ಲಿರುವ ನಮ್ಮೂರಲ್ಲಿ ಎಲ್ಲರ ಮನೆಯವರೂ ಕರೆಂಟಿನ ಮೇಸ್ತ್ರಿಗಳೇ...!!!

ಮಣ್ಕುಳಿಯ ಘಟ್ಟ ಇಳಿಯುವ ದಾರಿ...

ನಮ್ಮೂರಿನ ದೇವಸ್ಥಾನ ಚಂದಗುಳಿಗೆ ಮೊದಲು ಕಾಲುಹಾದಿಯಲ್ಲೇ ಹೋಗುತ್ತಿದ್ದಾಗ ಮಣ್ಕುಳಿಯ ಘಟ್ಟಗಳು ಎಂದರೆ ಭಯವಾಗುತ್ತಿತ್ತು. ಸುತ್ತಲೂ ಆವರಿಸಿರುವ ಕರಿಯ ಅಡವಿ, ದಾರಿಯಲ್ಲಿ ರಕ್ತ ಹೀರುವ ಕೋಟಿಗಟ್ಟಲೇ ಉಂಬಳಗಳು. ಮೊಳಗೊಮ್ಮೆಯಲ್ಲಿ ಯಾರನ್ನಾದರೂ ಕೇಳಿ, ಮಣ್ಕುಳಿಯ ಬಗ್ಗೆ ಎಲ್ಲರಿಗೂ ವಿಶೇಷ ಆದರವಿದೆ.... ಎಲ್ಲಾ ದೃಷ್ಟಿಯಿಂದಲೂ....