ಹಳೆಯ ಕೊಳಲೊಳಗೆ ಹೊಸ ಉಸಿರು

ಕ್ಷಣಕ್ಷಣಕ್ಕೂ ಹೊಸ ಆಲಾಪದಲ್ಲಿ...

Friday, October 30, 2009

ಪಾಕಶಾಸ್ತ್ರ ಮಹಿಮೆ

" ಏಯ್ ತಮಾ... ಕುಕ್ಕರ್ ನಲ್ಲಿ ಬರೀ ಅಕ್ಕಿ ಅಷ್ಟೇ ಇಟ್ಟು ಒಲೆ ಮೇಲೆ ಇಟ್ರೆ ಅನ್ನ ಹೆಂಗಾಗವೋ ಮಾರಾಯಾ....:-) ... ಅಕ್ಕಿಗೆ ನೀರು ಯಾರು ಹಾಕ್ತ್ವ ಮಾರಾಯಾ " ....ಇದು ನನ್ನ ಅಣ್ಣನ ಧಾರವಾಡದ ಗೆಳೆಯರ ರೂಮಿನಲ್ಲಿ ಇದ್ದಾಗ ನಡೆದ ಕಥೆ.
ನನ್ನ ಅಡುಗಾಪ್ರಮಾದದ ಪ್ರಥಮ ಅನುಭವ!!!!!

* * *

ಅಲ್ಲಿಯವರೆಗೂ ನನಗೆ ಅಡುಗೆ ಮಾಡುವದು ಅಂದ್ರೆ ಇಷ್ಟೆಲ್ಲಾ ಕಷ್ಟದ ಕೆಲಸ ಎಂಬ ಕಲ್ಪನೆಯೇ ಇರಲಿಲ್ಲ. ಅಡುಗೆ ಮನೆಗೆ ಹೋದರೆ ತಿನ್ನಲು ಏನಾದರೊಂದು ಸಿಕ್ಕುತ್ತದೆ ಎಂದಷ್ಟೇ ನನ್ನ ಅಂದಾಜಾಗಿತ್ತು. ಆದರೆ ನೀವು ಯಾವುದೇ ಅಡುಗೆಮನೆಯಲ್ಲಿ ಕಾಲಿರಿಸಿ, ಅಲ್ಲಿ ಅವರು ಅಡುಗೆ ಮಾಡುವದನ್ನು ಗಮನಿಸಿದರೆ ಅವರೆಲ್ಲಾ ಎಂಥಹಾ ಬುದ್ಧಿಜೀವಿಗಳು ಎಂಬ ಸತ್ಯ ಅರಿವಿಗೆ ಬರುತ್ತದೆ.

* * *

ಮಲೆನಾಡಿನಲ್ಲಿ ಅಪ್ಪೇಹುಳಿ ಎನ್ನುವ ಅಡುಗೆ ಪದಾರ್ಥ (ರುಚಿ : ನಿಂಬೆಕಾಯಿ, ಹುಳಿಕಂಚಿಕಾಯಿ ಇತ್ಯಾದಿ ಹುಳಿ ಪದಾರ್ಥಗಳನ್ನು ಉಪಯೋಗಿಸುವದರಿಂದ ಹುಳಿಹುಳಿಯಾಗಿರತ್ತದೆ, ಅನ್ನದ ಜೊತೆ ಕಲಸಿ ತಿನ್ನಬಹುದು ಅಥವಾ ಹಾಗೇ ಕುಡಿಯಬಹುದು. ನಂತರ ಬರುವ ಸುಖನಿದ್ರೆಗೆ ಸಾಟಿಯಿಲ್ಲ) ಹಿಮಾಲಯದ ಹಿಮದಷ್ಟೇ ಪ್ರಖ್ಯಾತ.

ನಾವು ಮೈಸೂರಿನಲ್ಲಿದ್ದಾಗ ನನ್ನ ರೂಮ್ ಮೇಟ್ ಗಳಾದ ಕಿರಣ ಹಾಗೂ ಪಡ್ಡಿ (ಪ್ರದೀಪ್) ಇಬ್ಬರೂ ’ನಿನ್ನ ಊರಿನ ಅಪ್ಪೇಹುಳಿ ಮಾಡು’ ಎಂದು ದಂಬಾಲು ಬಿದ್ದರು. ಕೂಡಲೇ ಎಲ್ಲೋ ಕೇಳಿ ನೆನಪಿಗೆ ಬಂದಂತೆ ನೀರಿಗೆ ಒಂದು ಒಗ್ಗರಣೆ ಕೊಟ್ಟೆ. ಆದರೆ ಅಷ್ಟೇ ಮಾಡಿದರೆ ಅಪ್ಪೇಹುಳಿ ಆಗಲಾರದೆಂದು ಕಲ್ಪನೆಯೇ ಇರಲಿಲ್ಲ. ಪಡ್ಡಿ ಮತ್ತು ಕಿರಣ ಇಬ್ಬರೂ ನನ್ನ ಹೊಸರುಚಿಯ ರುಚಿ ನೋಡಿ ಮುಖ ಹುಳಿ ಮಾಡಿದರು. ಮರುದಿನದವರೆಗೆ ಹಾಗೆಯೇ ಇಟ್ಟ ಅಪ್ಪೇಹುಳಿ ಹೊಸಥರಹದ ರುಚಿಗೆ ಮೂಡಿತು. ಮರುದಿನ ರೂಮಿಗೆ ಬಂದ ನಮ್ಮ ಇನ್ನೊಬ್ಬ ದೊಸ್ತ ಅಜುವಿಗೆ ಅಪ್ಪೇಹುಳಿಯ ವರ್ಣನೆ ಮಾಡಿದ ಕೂಡಲೇ ಆತ ಅಡುಗೆ ಮನೆಗೆ ಹೋಗಿ ಉಳಿದಿದ್ದ ಅಪ್ಪೇಹುಳಿಯನ್ನು ಗಟಗಟನೆ ಕುಡಿದೇಬಿಟ್ಟ!!! ’ ಆಹಾ... ಎನ್ ಸೂಪರ್ ಮಾಡಿದೀಯೋ ಮಗಾ.... " ಎಂದು ಹೇಳುತ್ತಾ ಆನಂದದ ಪರಾಕಾಷ್ಠೆಗೆ ತಲುಪಿಬಿಟ್ಟ.

* * *

ಹೀಗೇ ನಡೆದ ನನ್ನ ಅಡುಗೆಯ ಪ್ರಯೋಗಗಳಲ್ಲಿ ಅನೇಕ ಸತ್ಯವನ್ನು ಕಂಡುಕೊಂಡಿದ್ದೇನೆ. ನನ್ನ ಸಹನೆ, ನೆನಪಿನಶಕ್ತಿ ಎಲ್ಲವನ್ನೂ ಓರೆಗಲ್ಲಿಗೆ ಹಚ್ಚಿದ್ದೇನೆ. ಅದರಲ್ಲಿ ಪ್ರಥಮ ಸತ್ಯವೆಂದರೆ ’ನಾನು ಹಾಲು ಕಾಯಿಸಲು ಅಯೊಗ್ಯ, ಅದು ನನ್ನಿಂದ ಸಾಧ್ಯವಿಲ್ಲ’ ಎಂದು.

* * *

ನನ್ನ ಅಡುಗೆಮನೆಯ 6 ವರ್ಷಗಳ ಅನುಭವವ ಹೊರತಾಗಿಯೂ ವಾರಕ್ಕೆ 4 - 5 ದಿನ ಒಲೆಯ ಮೇಲಿಟ್ಟ ಹಾಲು ಉಕ್ಕಿ ಒಲೆಯನ್ನೆಲ್ಲಾ ಆವರಿಸಿಬಿಡುವದೂ, ನಂತರ ನಾನು ಅದನ್ನು ಅಸಾಧ್ಯವಾದ ನೋವಿನಿಂದ ಒರೆಸುವುದೂ ಒಂದು ಸಾಮಾನ್ಯ ವಿಷಯ. ಆದರೆ ಮೊನ್ನೆಯ ಒಂದು ಘಟನೆ ನನಗೆ ಪ್ರಥಮ ಸತ್ಯದರ್ಶನವನ್ನು ಮಾಡಿಸಿತು. ಒಲೆಯ ಮೇಲಿಟ್ಟ ಹಾಲು ಸತತವಾಗಿ 3-4 ಗಂಟೆಗಳ ಕಾಲ ಕುದಿದು.... ಬಿಳಿಯ ಹಾಲು ಕಪ್ಪಾಗಿ... ಫಳಫಳ ಹೊಳೆಯುತ್ತಿದ್ದ ಪಾತ್ರೆಯೂ ಕಪ್ಪಾಗಿ....ರೂಮಿನ ತುಂಬಾ ಹೊಗೆ ಆವರಿಸಿಬಿಟ್ಟಿತು... ಆದರೆ ನನ್ನ ಕೊಳಲ ಜೊತೆಯಲ್ಲಿದ್ದ ಮನಸ್ಸಿಗೆ ಇದ್ಯಾವುದರ ಪರಿವೆಯೇ ಆಗದೇ,... ಹೀಗೇ ಅವಾಂತರಗಳ ಸರಮಾಲೆ.....

* * *

ಅಡುಗೆಮನೆ ಎಂದರೆ ಅದೊಂದು ಎಲ್ಲಾ ಥರಹದ ಜೀವಿಗಳಿಗೆ ಆಶ್ರಯತಾಣ. ಅಲ್ಲಿ ಮನುಷ್ಯನೇ ಅಲ್ಪಸಂಖ್ಯಾತ. ರಾತ್ರಿ ಲೈಟ್ ಆಫ್ ಮಾಡಿದಕೂಡಲೇ ಹೊರಬರುವ ಸಾವಿರಾರು ಜಿರಲೆಗಳು... ನಮ್ಮ ಕಸದಬುಟ್ಟಿಯಲ್ಲಿ ಸದಾ ಮನೆ ಮಾಡಿರುವ ಇಲಿಗಳು... ನಮ್ಮ ರೂಮಿನಲ್ಲಿ ಕಾಯಿಸುವ ಹಾಲಿನ ಮೇಲೆ ಸದಾ ಕಣ್ಣಿಟ್ಟಿರುವ ಬೀದಿಯ ಬೆಕ್ಕು...ಊರಿಂದ ತರುವ ಬೆಲ್ಲದ ಡಬ್ಬಿಗೆ ನೇರ ದಾಪುಗಾಲು ಹಾಕುವ ಇರುವೆಗಳು... ಇವೆಲ್ಲರೂ ನಮ್ಮ ಆಜನ್ಮ ವೈರಿಗಳಂತೆ ಭಾಸವಾಗುತ್ತಾರೆ.

ಇಷ್ಟೆಲ್ಲಾ ಕಷ್ಟಗಳನ್ನು ನಿಭಾಯಿಸಿ ರುಚಿಕರವಾದ ಅಡುಗೆ ತಯಾರುಮಾಡುವದು ಸುಲಭಸಾಮಾನ್ಯವೇ?

Tuesday, July 7, 2009


With my Guruji Vidwan Shri K Prabhakar Upadhyaya,mysore.(He is well known as KP Upadhyaya.)


Thursday, May 21, 2009

ದಿಕ್ಕಿಲ್ಲದ ಓಟ


ಆತ ಅಂದು ತನ್ನ ಅಜ್ಜನ ಬಳಿಗೆ ಒಡೋಡಿ ಬಂದ.
ಮಗುವಿನ ತವಕ, ಉದ್ವೇಗ, ಆವೇಶ, ದು:ಖ ಎಲ್ಲವನ್ನೂ ಗಮನಿಸಿದ ಆ ಹಿರಿಯ ಜೀವ ಕೇಳಿತು.
"ಮಗೂ, ನೀನು ದಣಿದಾಗ ನೀರು ಬೇಕೆಂದು ಹಣಹಣಿಸುತ್ತೀಯಲ್ಲವೇ...?".
"ಹೌದು, ಖಂಡಿತವಾಗಿಯೂ." ಆತ ಹೇಳಿದ.
"ಆದರೆ ಗಂಟಲುಪೂರ್ತಿ ನೀರು ಕುಡಿದಾದಮೇಲೆ...?"
ಆತ ಕರಗಿದ ಆವೇಶದಿಂದ ಮರುಮಾತನಾಡದೆ ಬಂದಂತೆಯೇ ಹಿಂತಿರುಗಿದ.

Wednesday, February 11, 2009

ಯಾಕೆ ಮೂಕನಾದೆ?

ಅಂದು ಮುಂಜಾನೆಯ ಗಡಗಡಿಸುವ ಛಳಿಯಲ್ಲಿ ಚಹಾ ಅಂಗಡಿಯತ್ತ ನಡೆದಿದ್ದೆ. ಅಂದ್ಯಾಕೋ ಮನಸ್ಸು ಗರಬಡಿದಂತೆ ಸ್ಥಬ್ಧವಾಗಿತ್ತು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಂದು ಅಂಗಡಿಯಿಂದ "ಯಾಕೆ ಮೂಕನಾದೋ.... ಗುರುವೆ ನೀನು ಯಾಕೆ ಮೂಕನಾದೋ...? " ಎಂಬ ಭೀಮಸೇನ ಜೋಷಿಯವರು ಹಾಡಿರುವ ಭಕ್ತಿಗೀತೆ ಮೂಡತೊಡಗಿತ್ತು.

ಸ್ವರಸಾಮ್ರಾಟ ಭಾರತರತ್ನ ಪಂಡಿತ್ ಭೀಮಸೇನ ಜೊಷಿಯವರ ಗಾಯನ ಎಂಥವರನ್ನೂ ಮಂತ್ರಮುಗ್ಧಗೊಳಿಸಬಲ್ಲಂತಾದ್ದು. ಒಮ್ಮೆ ಅವರ ಗಾಯನ ಕಿವಿಗೆ ಬಿದ್ದರೆ ಸಾಕು, ಅದು ಎಷ್ಟೋ ಹೊತ್ತಿನವರೆಗೆ ನಮ್ಮ ಕಿವಿಯಲ್ಲಿ ರಣರಣಿಸುತ್ತಿರುತ್ತದೆ, ಅದು ಎಷ್ಟೋ ಹೊತ್ತಿನವರೆಗೆ ನಮ್ಮ ನಾಲಿಗೆ ಅದನ್ನೇ ಗುನುಗುನಿಸುತ್ತಿರುತ್ತದೆ.

"ನಾಥನು ನೀನು.. ಅನಾಥನು ನಾನು .." ಎಂದು ಹೀಗೆ ಮುಂದುವರಿಯುತ್ತಾ ಆ ಗೀತೆ ನನ್ನನ್ನು ಭಕ್ತಿಸಾಗರದಲ್ಲಿ ಮುಳುಗಿಸಿಬಿಟ್ಟಿತು. ಹಾಗೇ ಗಾಯನ ಮುಗಿಯುವ ವರೆಗೂ ಅಲ್ಲೇ ನಿಂತು, ನಂತರ ಆ ಅಂಗಡಿಯವನಿಗೆ ಅಭಿನಂದಿಸಿ "ಯಾಕೆ ಮೂಕನಾದೋ ... " ಎಂದು ಹಾಡುತ್ತಾ ಮುನ್ನಡೆದೆ.

Saturday, December 27, 2008

ದೀಪವೂ ನಿನ್ನದೇ... ಗಾಳಿಯೂ ನಿನ್ನದೇ..
























ಸ್ಥಳ: ಭುವನಗಿರಿ ದೇವಸ್ಥಾನ. ಸಿದ್ದಾಪುರ.ಉತ್ತರ ಕನ್ನಡ.

ದಿಗಂತದಲ್ಲಿ ನೆಟ್ಟ ನೋಟ

ಸ್ಥಳ : ಹೆಜೆನಿ ಗುಡ್ಡ. ಸಿದ್ದಾಪುರ ತಾಲೂಕು, ಜೋಗದ ರಸ್ತೆ.

Monday, December 8, 2008

ದಬ್ಬೆ ಜಲಪಾತ

ದಬ್ಬೆ ಜಲಪಾತ / ಕೆಪ್ ಜೋಗ :

ಬೆಂಗಳೂರಿನಲ್ಲಿ ದಿನವಿಡೀ ಕಂಪ್ಯೂಟರನ್ನು ಎವೆಯಿಕ್ಕದೇ ನೋಡುತ್ತಿರುವ ಕಣ್ಣುಗಳಿಗೆ, ದಿನವಿಡೀ ವಾಹನಗಳು ಕಾರುವ ಹೊಗೆಯನ್ನು ಕುಡಿಯುವ ಶ್ವಾಸನಾಳಗಳಿಗೆ, ವರ್ಷವಿಡೀ ಕಿವಿ ಹರಿದುಹೋಗುವಷ್ಟು ಶಬ್ದಾಘಾತಗಳಿಂದ ತತ್ತರಿಸಿಹೋಗುವ ಕಿವಿಗಳಿಗೆ ಏನಾದರೂ ಸಾಂತ್ವನವನ್ನೀಯುವ ಬಗೆ ಬೇಕೇ ಬೇಕಿತ್ತು.

ಕೃಷ್ಣ, ಪ್ರವೀಣ ನಾರಾ, ಮಿಥುನ್ ಯು, ಪ್ರದೀಪ ಕೊಪ್ಪಾ, ಪ್ರಮೋದ nc, ಪವನ್ ಶಾಸ್ತ್ರಿ ಎಲ್ಲಾ ಕೂಡಿಕೊಂಡು ದಬ್ಬೆ ಜಲಪಾತದೆಡೆಗೆ ಹೊರಟೆವು. ಈ ಮೊದಲೇ ಇಲ್ಲಿಗೆ ಚಾರಣಿಸಿದ್ದ ಶ್ರೀಕಾಂತ್ ಅವರ ಮಾರ್ಗದರ್ಶನ ಇದ್ದಿದ್ದರಿಂದ ನಮ್ಮ ಪ್ರಯಾಣದ ಎಲ್ಲಾ ಪೂರ್ವಯೋಜನೆಗಳು ಸುಲಲಿತವಾದವು. ’ನಕ್ಸಲರ ಕಾಟ’ ಎಂಬ ಭಯ ಎಲ್ಲ ಕಡೆ ಆವರಿಸಿರುವದರಿಂದ,”ಶಿವಮೊಗ್ಗದ ಕಡೆ ಕಾಡು ತಿರುಗಲು ಹೊರಟಿದ್ದೇವೆ”, ಎಂದ ಕೂಡಲೇ ನನ್ನ ಅಮ್ಮ ನನಗೊಮ್ಮೆ ಎಚ್ಚರಿಕೆಯ ಸುರಿಮಳೆಗೈದಳು. ’ಪೇಟೆಯಲ್ಲಿ ಭಯೋತ್ಪಾದಕರ ಕಾಟ, ಕಾಡಿನಲ್ಲಿ ನಕ್ಸಲರ ಕಾಟ. ಎಲ್ಲಿ ಹೋದರೂ ಇದ್ದರೂ ತೊಂದರೆ ತಪ್ಪಿದ್ದಲ್ಲ’, ಎಂದು ಹೇಳಿ ನಾನೂ ಕೈ ತೊಳೆದುಕೊಂಡೆ:-)




ರಾತ್ರಿಯ ಶಿವಮೊಗ್ಗೆಯ ರೈಲು ಬಳಸಿ, ಸಾಗರದಲ್ಲಿ ತಿಂಡಿ ತಿಂದು, ಕಾರ್ಗಲ್(ಸಾಗರದಿಂದ ಜೋಗದ ರಸ್ತೆ, 20km) ಎಂಬ ಊರಿಗೆ ಬಸ್ಸಿನಲ್ಲಿ ಬಂದೆವು. ಇಲ್ಲಿಂದ ಭಟ್ಕಳ ರಸ್ತೆಯಲ್ಲಿ ಹೊಸಗದ್ದೆ (ಕಾರ್ಗಲ್ ನಿಂದ 20km, ಭಟ್ಕಳದ ಕಡೆಗೆ) ಎಂಬ ಊರಿನಲ್ಲಿ ಇಳಿದುಕೊಂಡು ಸುಮಾರು ಆರು ಕಿಮಿ ಇರುವ ದಬ್ಬೆಯ ಜೋಗದ ಕಡೆ ನಡೆದೆವು.

ದಾರಿಯುದ್ದಕ್ಕೂ ಸಿಕ್ಕುತ್ತಿದ್ದ ಹರಣಿ ನೀರಿನಲ್ಲಿ ಆಟವಾಡುತ್ತಾ, ಕಿರು ಜಲಪಾತಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯುತ್ತಾ ಮುಂದೆ ಸಾಗುತ್ತಿದ್ದೆವು. ಆದರೆ ದಾರಿಯುದ್ದಕ್ಕೂ ಇದ್ದ ಅನೇಕ ತಿರುವುಗಳು ನಮ್ಮನ್ನು ಬಹಳ ಸುಲಭವಾಗಿ ದಾರಿತಪ್ಪಿಸುವಂತಿದ್ದವು. ದಬ್ಬೆ ಜಲಪಾತದಷ್ಟೇ ಹೆಸರು ಮಾಡಿದವರೆಂದರೆ ದಬ್ಬೆಮನೆಯ ಮಂಜುನಾಥ ಗೌಡರು. ಇವರ ಮನೆಯ ಎದುರಿನ ಗದ್ದೆಯಂಚಿನಲ್ಲೇ ಕೆಳಗಡೆ ಜಲಪಾತವಿರುವದರಿಂದ, ಬಂದ ಚಾರಣಿಗರಿಗೆ ಊಟ, ವಸತಿ ಇತ್ಯಾದಿ ಇವರ ಮನೆಯಲ್ಲೇ ನೆರವೇರುತ್ತದೆ. ಆದ್ದರಿಂದ ದಾರಿಯುದ್ದಕ್ಕೂ ಕಂಡಕಂಡವರಲ್ಲೆಲ್ಲಾ "ಹೊಯ್... ಮಾರಯ್ರೆ...ಗೌಡ್ರ ಮನೆಗೆ ದಾರಿ ಹೆಂಗೆ...?" ಎಂದು ವಿಚಾರಿಸುತ್ತಿದ್ದೆವು.

ಅಂತೂ ಗೌಡರ ಮನೆಗೆ ಬರುವಷ್ಟರಲ್ಲೇ ಮಧ್ಯಾಹ್ನವಾಗಿತ್ತು. ’ಕೊನೆಯಲ್ಲಿ ಬೇಕಾಗಬಹುದು’ ಎಂದು ಗೌಡರು ಕೊಟ್ಟ ಹಗ್ಗವನ್ನು ಹೆಗಲಿಗೆ ಏರಿಸಿ ಭತ್ತದ ಗೆದ್ದೆಯ ತುದಿಯಿಂದ ಕೆಳಗೆ ಇಳಿಯಲು ಶುರು ಮಾಡಿದೆವು. ಸುಮಾರು ಅರ್ಧ ಕಿಮಿಯಷ್ಟು ಲಂಬವಾಗಿ ಗದ್ದೆಯ ನೆತ್ತಿಯಿಂದ ಇಳಿಯಬೇಕು. ಕೇವಲ ಮರಗಳ ಹಾಗೂ ಬಳ್ಳಿಗಳ ಕಾಂಡದ ಸಹಾಯದಿಂದ ಕೆಳಗೆ ಸಾವಧಾನವಾಗಿ ಇಳಿಯುತ್ತಿದ್ದ ಅನುಭವವಂತೂ ’ಸಖತ್’. ಕೆಲವೊಮ್ಮೆ ನೀವು ಕೈಯಲ್ಲಿ ಹಿಡಿದಿರುವದು ಬಳ್ಳಿಯೋ ಅಥವಾ ಹಾವೋ ಎಂದು ಗೊಂದಲವಾಗುತ್ತಿತ್ತು.!!! ದಾರಿಯುದ್ದಕ್ಕೂ ಹಾವಿನ ಹಾಗೂ ಯಾವಾಗ ಬೇಕಾದರೂ ಆಕ್ರಮಣ ಮಾಡಬಲ್ಲಂತಹ ಕರಡಿಯ ಅಸ್ತಿತ್ವದ ಬಗ್ಗೆ ಒಂದು ಲಕ್ಷ್ಯವನ್ನಿಟ್ಟುಕೊಂಡೇ ಕೆಳಗೆ ಇಳಿದೆವು.



ದಬ್ಬೆಯ ವೈಶಿಷ್ಟ್ಯವೆಂದರೆ ಕೆಳವರೆಗೆ ನೀವು ಇಳಿಯುವವರೆಗೂ ಜಲಪಾತ ಗೋಚರಿಸುವದಿಲ್ಲ. ಆದರೆ ಸುಮಾರು 20-30 ಅಡಿಗಳಷ್ಟು ಎತ್ತರ ಬಾಕಿ ಇರುವಾಗ ಇದು ಹಠಾತ್ತಾಗಿ ಗೋಚರಿಸುತ್ತದೆ. ಆ ದೃಶ್ಯದ ವೈಭವವನ್ನು ಅಲ್ಲಿಗೆ ಹೋಗಿಯೇ ಅನುಭವಿಸಬೇಕು. ಪ್ರದೀಪ ಹೇಳುವಂತೆ, ’’God levellu magaa... God levallu..."!!!.




ಎಲ್ಲರೂ ಉತ್ಸಾಹಭರಿತರಾಗಿ ನೀರಿನಲ್ಲಿ ಆಟ-ಸ್ನಾನಗಳನ್ನು ಮುಗಿಸಿ ಸ್ವಲ್ಪ ಸಮಯ ಪೃಕೃತಿಯ ಸವಿಯನ್ನು ಸವಿಯುತ್ತಾ ಅಲ್ಲೇ ಕಳೆದೆವು.
ದಬ್ಬೆ ಜೋಗದ ಹತ್ತಿರದ ನೋಟ.
ಗಾಳಿಯ ರಭಸಕ್ಕೆ
ನೀರು ಸಿಡಿಯುವದರಿಂದ
ಹತ್ತಿರದವರೆಗೆ
ಕ್ಯಾಮೆರಾ
ತರಲಾಗುವದಿಲ್ಲ.







ಮತ್ತೆ ತಿರುಗಿ ಬೆಟ್ಟವನ್ನು ಹತ್ತಿ ಬರುವಷ್ಟರಲ್ಲಿ ಎಲ್ಲರ ಹೊಟ್ಟೆ ನಿರ್ವಾತವಾಗಿದ್ದರೂ, ಮನಸ್ಸು ಮಾತ್ರ ಗೌಡರ ಮನೆಯಲ್ಲಿ ಆಗಲೇ ತಯಾರಾಗಿದ್ದ ಬಿಸಿಬಿಸಿ ಅನ್ನ-ಸಾರು, ಮಜ್ಜಿಗೆ, ಕಡಿ ಉಪ್ಪು, ಮಿಡಿ ಉಪ್ಪಿನಕಾಯಿ ಇವನ್ನೆಲ್ಲಾ ಮೇಯುವ ಆಸೆಯಿಂದ ಉಲ್ಲಸಿತವಾಗಿತ್ತು.


ಗೌಡರ ಮನೆಯ ಗದ್ದೆಯಲ್ಲಿ ಕ್ಲಿಕ್ಕಿಸಿದ ಭತ್ತದ ತೆನೆ >>










<< ಗೌಡರ ಮನೆಯ ಹಸಿ ಅಡಿಕೆ.


ಒಟ್ಟಿನಲ್ಲಿ ದಬ್ಬೆಜೋಗ ಒಂದು ದಿನದ ಚಾರಣಕ್ಕೆ ಅತಿಸೂಕ್ತವಾದ ಜಾಗ. ಬೇಕಷ್ಟು ನಡಿಗೆ, ಕಾಡು, ಇಳಿಯುವದು, ಹತ್ತುವದು, ಕೆಲವೊಂದು ಕಡೆ ಸವಾಲುಹಾಕುವಷ್ಟು. ಒಟ್ಟಿನಲ್ಲಿ ನಮಗಿರುವ ಪೃಕೃತಿಯ ಜೊತೆಗಿನ ಒಡನಾಟದ ಬಯಕೆ ಕೊಂಚವಾದರೂ ಈಡೇರುವದರಲ್ಲಿ ಸಂಶಯವಿಲ್ಲ.


ಹಾಗೆಯೇ ನಮ್ಮ ಮುಂದಿನ ಹವಣಿಕೆಯ ಪ್ರಕಾರ ಮತ್ತೆ ಸಾಗರದತ್ತ ಪ್ರಯಾಣಿಸಲು, ವ್ಯಾನೊಂದನ್ನು ಬಾಡಿಗೆಗೆ ಪಡೆಯಲು ಪಕ್ಕದ ಊರಾದ ಕೊಡ್ಲಕೆರೆಯ ಇನ್ನೊಂದು ಗೌಡರ ಮನೆಯತ್ತ ಬೆಳದಿಂಗಳಿನಲ್ಲಿ ನಡೆದೆವು.

ದಬ್ಬೆ ಜೋಗಕ್ಕೆ ನೀವೂ ಹೋಗಿಬನ್ನಿ. ಆನಂದಿಸಿ.

ನನ್ನ ಕುರಿತು...

My Photo
Satish MR
ಓ ಬಿಡಿ...ನನ್ನ ಬಗ್ಗೆ ಏಕೆ ಕೇಳುತ್ತೀರಾ..? ನನ್ನ ಬರಹದಲ್ಲಿ ನಾನು ಸಂಪೂರ್ಣವಾಗಿ ಇಲ್ಲ..ಎಲ್ಲವನ್ನೂ ಬರಹದಲ್ಲಿ ತುಂಬಬಹುದೇ..? ಆದರೂ ಅಲ್ಲೋ ಇಲ್ಲೋ ಸಣ್ಣ ಕಥೆಗಳನ್ನ ಬರೆದಿಡುವ ಚಟ, ಹುಣ್ಣಿಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ಯೋಗಾಭ್ಯಾಸ ಮಾಡಿ ನಾನು ಅತೀ fit ಎಂದು ಹೊಗಳಿಕೊಳ್ಳುವುದು,ಕಾಡಲ್ಲಿ ಕ್ಯಾಮೆರಾ ಇಲ್ಲದೇ ಫೊಟೋಗ್ರಫಿಯ ಬಗ್ಗೆ ಚಿಂತಿಸುವುದು, ಸಮಯ ಸಿಕ್ಕಾಗೆಲ್ಲಾ ಕಾಡು ತಿರುಗುವುದು,ಬೆಟ್ಟಗಳನ್ನು ಹತ್ತಿ ಮತ್ತೆ ಇಳಿಯುವುದು :-), ಊರೂರು ಸುತ್ತುವುದು....:-) ಹಿಂದೂಸ್ತಾನೀ ಕೊಳಲನ್ನು ನುಡಿಸುವದು ಮತ್ತು ಆಲಿಸುವುದು... ಇತ್ಯಾದಿ ಇತ್ಯಾದಿಗಳು...ಅಥವಾ..ಹುಚ್ಚು ಮನಸ್ಸಿನ ಹತ್ತು ಮುಖಗಳು....
View my complete profile